ಚಿಕ್ಕಮಗಳೂರು: ಕರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಸಿ.ಟಿ.ರವಿ ಉದ್ಘಾಟಿಸಿದರು.
ನಂತರ ಶಾಸಕ ಸಿ.ಟಿ.ರವಿ ಮಾತನಾಡಿ ಕರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ, ಚಿಕ್ಕನಹಳ್ಳಿ, ಕರ್ತಿಕೆರೆ, ಬೀರದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ೯೦ ಲಕ್ಷ ರೂಗಳ ಅನುದಾನವನ್ನು ನೀಡಿ ಅದರ ಉದ್ಘಾಟನೆಯನ್ನು ಬೀರ ದೇವರಹಳ್ಳಿಯಲ್ಲಿ ನೆರೆವೇರಿಸಲಾಗುತ್ತಿದೆ, ಜತೆಗೆ ಇಲ್ಲಿಯ ಶಾಲೆಗೆ ೨೧ ಲಕ್ಷದ ೨೦ ಸಾವಿರ ರೂ ವೆಚ್ಚದಲ್ಲಿ ಶಾಲೆಯ ೨ ಕೊಠಡಿ ನಿರ್ಮಿಸಲಾಗಿದೆ. ಚಿಕ್ಕದೇವನಹಳ್ಳಿ ಕನಕ ಸಮುದಾಯ ಭವನಕ್ಕೆ ೧೦ ಲಕ್ಷ, ಊರಿನ ಒಳಗಿನ ರಸ್ತೆ ಕಾಮಗಾರಿಗೆ ೩೦ ಲಕ್ಷ, ಒಟ್ಟು ೧ ಕೋಟಿ ೪೦ ಲಕ್ಷ ರೂಗಳ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರೆವೇರಿಸಲಾಗುತ್ತಿದೆ ಎಂದರು.
ಕರ್ತಿಕೆರೆ ಗ್ರಾಮ ಪಂಚಾಯಿತಿ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಾಗಿ ಒಂದು ಪಂಚಾಯಿತಿ ವ್ಯಾಪ್ತಿಗೆ ೧೯ ಕೋಟಿ ರೂ ಅನುದಾನವನ್ನು ನೀಡಲಾಗಿದೆ, ದಂಟರಮುಕ್ಕಿಯಲ್ಲಿ ೬೦ ಕೋಟಿ ರೂ ವೆಚ್ಚದ ಡಿ.ಸಿ ಕಾಂಪ್ಲೆಕ್ಸ್ ಶಂಕುಸ್ಥಾಪನೆ ನೆರೆವೇರಿಸಲಾಗಿದ್ದು, ಅದರ ಎದುರಿನ ದಂಟರಮುಕ್ಕಿ ಸರ್ಕಲ್ನಲ್ಲಿ ೪೦ ಲಕ್ಷ ರೂ ವೆಚ್ಚದಲ್ಲಿ ಸಂಗೋಳ್ಳಿರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಕುಸ್ಥಾಪನೆ ನೆರೆವೇರಿಸಿದ್ದು ಒಂದು ತಿಂಗಳಿನೊಳಗಾಗಿ ಪ್ರತಿಮೆಯನ್ನು ಅನಾವರಣ ಗೊಳಿಸಲಾಗುವುದು ಎಂದರು.
ಚಿಕ್ಕಮಗಳೂರಿನ ಜನತೆಗೆ ಅನುಕೂಲವಾಗಲೆಂದು ಮಾಡಿದ ಹಲವು ವರ್ಷದ ಹೋರಾಟದ ಫಲವಾಗಿ ೬೩೦ ಕೋಟಿ ರೂ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ತೇಗೂರು ಬಳಿ ಮೆಡಿಕಲ್ ಕಾಲೇಜು ನಿರ್ಮಾಣ ನಡೆಸಲಾಗುತ್ತಿದೆ, ಅಭಿವೃದ್ಧಿಗೆ ಆದ್ಯತೆಯನ್ನು ನೀಡಿ ಶಕ್ತಿ ಮೀರಿ ಕೆಲಸವನ್ನು ಮಾಡಲಾಗುತ್ತಿದೆ, ಕಾರ್ಯದ ಒತ್ತಡ ಮತ್ತು ಕೆಲಸದ ನಿಮಿತ್ತ ವಾಹನದಲ್ಲಿ ಓಡಾಟ ಹೆಚ್ಚಾಗಿದ್ದು, ಸಮಸ್ಯೆ ಇದ್ದವರು ಕರೆ ಮಾಡಬಹುದು. ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ಚಿಕ್ಕನಹಳ್ಳಿ ಗ್ರಾಮದಲ್ಲಿ ಬೋರ್ ನಿರ್ಮಿಸಿದರೂ ನೀರು ದೊರೆತಿಲ್ಲ. ಶಾಶ್ವತ ಯೋಜನೆಯಾಗಿ ಕುಡಿಯುವ ನೀರನ್ನು ಒದಗಿಸಬೇಕೆಂದು ಕರ್ತಿಕೆರೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಭಾಗದಲ್ಲಿಯೂ ಜಲಜೀವನ್ ಮಿಷನ್ ಯೋಜನೆಯಡಿ ಮನೆ-ಮನೆಗೆ ನಲ್ಲಿ ಸಂಪರ್ಕ ನೀಡಿ ನೀರು ಒದಗಿಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಬಿಜೆಪಿ ಮುಖಂಡ ರಾದ ಕೋಟೆ ರಂಗಣ್ಣ, ಬೀಕನಹಳ್ಳಿ ಸೋಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್, ಸದಸ್ಯರಾದ ಮೋಹನ್, ರೇಣುಕಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕನಕರಾಜ್ಅರಸ್, ನೆಟ್ಟೆಕೆರೆಹಳ್ಳಿ ಜಯ್ಯಣ್ಣ, ಗ್ರಾಮಸ್ಥರಾದ ಬಸವರಾಜ್, ಲೋಕೇಶ್, ಕೆಂಪಮ್ಮ, ಸಿದ್ಧರಾಮ್, ಕುಮಾರ್, ಬೀರೆಗೌಡ, ಸಿದ್ದೇಗೌಡ ಇದ್ದರು.