ಚಿಕ್ಕಮಗಳೂರು: ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಗಿಫ್ಟ್ ರಾಜಕೀಯ ಜೋರಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರನ್ನು ಸೆಳೆಯುಲು ಕಸರತ್ತು ಆರಂಭಿಸಿದ್ದು ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ ಮಾಡುವಲ್ಲಿ ಕಾರ್ಯಕರ್ತರು ನಿರತಾಗಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಎಲ್ಲಾ ಪಕ್ಷಗಳ ಆಮಿಷಗಳು ಹೆಚ್ಚಾಗುತ್ತಿವೆ.ಇದು ನಡುವೆ ಮತದಾರರಿಗೆ ಹಂಚಲು ಕಾಂಗ್ರೆಸ್ ಕಾರ್ಯಕರ್ತರು ತಂದಿದ್ದ ಒಂದು ಲೋಡ್ ಕುಕ್ಕರ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಶಾಸಕ ಟಿ ಡಿ ರಾಜೇಗೌಡರ ಭಾವಚಿತ್ರ ಇರುವ ಕುಕ್ಕರ್ : ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಂಚಲು ಪಿಕ್ ಅಪ್ ನಲ್ಲಿ ತಂದಿದ್ದ ಕುಕ್ಕರ್ ಗಳನ್ನು ಜಯಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಯಪುರ ವ್ಯಾಪ್ತಿಯ ತೆಂಗಿನಮನೆ ಸಮೀಪ ಕುಕ್ಕರ್ ಗಳನ್ನು ಹಂಚಲು ತಂದಿದ್ದರು. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ನವರು ಸೀರೆ ಹಂಚಿದ್ದರ ಕುರಿತಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಶಾಸಕ ಟಿ ಡಿ ರಾಜೇಗೌಡ, ನಾವು ಅಭಿವೃದ್ಧಿ ಮಾಡಿ ಮತ ಕೇಳುತ್ತೇವೆ. ಜನರಿಗೆ ಯಾವುದೇ ಆಮಿಷಗಳನ್ನು ಒಡ್ಡುವುದಿಲ್ಲ ಎಂದಿದ್ದರು.
ಆರೋಪವನ್ನು ಕಾರ್ಯಕರ್ತರ ಮೇಲೆ ಹಾಕಿದ ಶಾಸಕ: ಆದರೆ ಈಗ ಕುಕ್ಕರ್ ಬಾಕ್ಸ್ ಮೇಲೆ ತಮ್ಮದೇ ಭಾವಚಿತ್ರವಿರುವ ಗಿಫ್ಟ್ ಗಳನ್ನು ಕಾರ್ಯಕರ್ತರು ಜನರಿಗೆ ನೀಡುತ್ತಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಕಾರ್ಯಕರ್ತರು ನನ್ನ ಹೆಸರಿನಲ್ಲಿ ನೀಡುತ್ತಿದ್ದಾರೆ ಎಂದು ಟಿ ಡಿ ರಾಜೇಗೌಡ ಹೇಳಿದ್ದಾರೆ.
ಎರಡು ದಿನದ ಹಿಂದೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಅವರು ಹಂಚಲು ತಂದಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಒಟ್ಟಾರೆ ಮೂರು ರಾಜಕೀಯ ಪಕ್ಷಗಳು ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಿಫ್ಟ್ ರಾಜಕೀಯ ಶುರುಮಾಡಿದ್ದು ಕ್ಷೇತ್ರದ ಪ್ರಜ್ಞಾವಂತ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.