ಚಿಕ್ಕಮಗಳೂರು: ಅಡುಗೆ ಅನಿಲ ಬೆಲೆ ನಿರಂತರ ಏರಿಕೆ ಗಗನಮುಖಿಯಾಗುತ್ತಿರ ವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಚೇ ದಿನ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಅಂದರೆ ೨೦೧೩, ೨೦೧೪ ರಲ್ಲಿ ಗೃಹ ಬಳಕೆಯ ೧೪.೨ ಕೆಜಿಯ ಅಡುಗೆ ಅನಿಲ ಬೆಲೆ ಸಿಲಿಂಡರ್ ಒಂದಕ್ಕೆ ೪೦೦ ರೂ.ಗಳಿದ್ದದ್ದು, ಮೋದಿ ಅವರು ಅಚ್ಚೇ ದಿನ ಬರಲಿದೆ ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿಯ ಸ್ಥಾನ ಅಲಂಕರಿಸಿದ ಆನಂತರದಲ್ಲಿ ಸಿಲಿಂಡರ್ ಬೆಲೆಯನ್ನು ನಿರಂತರವಾಗಿ ೬೦೦, ೭೦೦, ೮೦೦, ೯೦೦, ೧೦೦೦ ರೂ.ಗಳಂತೆ ಬೆಲೆ ಹೆಚ್ಚಳ ಮಾಡುವ ಮೂಲಕ ಇಂದು ೨೦೨೩ ರ ಮಾರ್ಚ್ ಆರಂಭದಲ್ಲಿಯೇ ೧೧೦೦ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಅಚ್ಚೇ ದಿನ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಗುರುವಾರ ನೀಡಿರುವ ಹೇಳಿಕೆಯಲ್ಲಿ ತಿವಿದಿದ್ದಾರೆ.
ಇನ್ನು ವಾಣಿಜ್ಯ ಬಳಕೆಯ ೧೯ ಕೆಜಿ ಸಿಲಿಂಡರ್ ಬೆಲೆ ೨೦೨೦, ೨೦೨೧ ರ ಅವಧಿಯಲ್ಲಿ ೧೯೧೭ ರೂ.ಗಳಿಗೆ ದೊರೆಯುತ್ತಿದ್ದದ್ದು ಎರಡು ವರ್ಷಗಳಲ್ಲಿ ೨೨೬೮ ರೂ.ಗಳಿಗೆ ಏರಿಕೆಯಾಗಿದೆ. ೨೦೨೨ ರ ಮಾರ್ಚ್ನಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಿಲಿಂಡರ್ ಬೆಲೆ ಹೆಚ್ಚಳ ತಡೆದಿದ್ದು, ಚುನಾವಣೆಯ ಆನಂತರದಲ್ಲಿ ಅಂದರೆ ೨೦೨೨ ರ ಮೇ ತಿಂಗಳಿನಲ್ಲಿ ಒಮ್ಮೆಲೆ ೨೫೦೮ ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿಸಲಾಗಿತ್ತು. ಈಗ ಸಿಲಿಂಡರ್ ಬೆಲೆಯನ್ನು ೩೫೦ ರೂಗ.ಳಿಗೆ ಹೆಚ್ಚಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.
೨೦೨೦ ರಲ್ಲಿ ಚುನಾವಣೆ ಸಂದರ್ಭದಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಬೆಲೆಯನ್ನು ೫೮೧ಕ್ಕೆ ನಿಲ್ಲಿಸಲಾಗಿತ್ತು. ಮೋದಿಯವರು ಮತ್ತೊಮ್ಮೆ ಮರು ಆಯ್ಕೆಯಾಗುವ ಮೂಲಕ ೨೦೨೧, ೨೦೨೨ ಮತ್ತು ೨೦೨೩ ರಲ್ಲಿ ಬೆಲೆಯನ್ನು ಗಗನಕ್ಕೆ ಚಿಮ್ಮಿಸಿ ಅಚ್ಚೇ ದಿನ ಪರಿಣಾಮವನ್ನು ತೋರಿಸಿದ್ದರು. ಈಗ ದಿನ ಬಳಕೆಯ ೧೪ ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ೧೧೦೦ಕ್ಕೆ ಮತ್ತು ವಾಣಿಜ್ಯ ಬಳಕೆಯ ೧೯ ಕೆಜಿ ಸಿಲಿಂಡರ್ ಬೆಲೆಯನ್ನು ೨೨೬೮ಕ್ಕೆ ತಲುಪಿಸಿ ಅಚ್ಚೇ ದಿನ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಛೇಡಿಸಿದ್ದಾರೆ.
ಬಡವರು, ಮಧ್ಯಮ ವರ್ಗದವರು ಸೇರಿದಂತೆ ದೇಶದ ಎಲ್ಲಾ ಜನರು ಬಳಸುವ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಉಪಗ್ರಹವನ್ನು ಗಗನಕ್ಕೆ ಚಿಮ್ಮಿಸುವ ಪ್ರಮಾಣದಲ್ಲಿ ಚಿಮ್ಮಿಸಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಹೇಳಿರುವ ಅವರು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಸಿ ಸಾಮಾನ್ಯ ಜನರ ತಲೆ ಮೇಲೆ ಅತಿಯಾದ ಭಾರ ಹೊರಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯವೈಖರಿ ದುರಾಡಳಿತಕ್ಕೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.
ಆನರ ಬಗ್ಗೆ ಕಳಕಳಿ ಇದ್ದರೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ದಿನ ಬಳಕೆಯ ವಸ್ತುಗಳ ಬೆಲೆಯನ್ನು ತಗ್ಗಿಸುವ ಮೂಲಕ ಹೊರೆ ಕಡಿಮೆ ಮಾಡಿ ಎಂದು ಒತ್ತಾಯಿಸಿರುವ ಅವರು, ಮುಂಬರಲಿರುವ ಚುನಾವಣೆಯಲ್ಲಿ ಜನರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.