ಬೀರೂರು: ಕಾರ್ ಮೇಲೆ ಬೋರ್ವೆಲ್ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೀರೂರು ಕೋರನಹಳ್ಳಿ ಸಮೀಪ ನಡೆದಿದೆ.
ಮಧ್ಯಾಹ್ನ ಬೀರೂರು ಪಟ್ಟಣದ ಬಸಪ್ಪ ಬಡಾವಣೆ ನಿವಾಸಿ ದರ್ಶನ್ ಅಜ್ಜಂಪುರ ತಾಲ್ಲೂಕು ಸೊಕ್ಕೆ ಗ್ರಾಮದಲ್ಲಿ ತೋಟ ಹೊಂದಿದ್ದು ಮಧ್ಯಾಹ್ನ ತೋಟಕ್ಕೆ ಹೊರಟಿದ್ದರು.
ಬೀರೂರಿನಿಂದ ಹೊರಟವರು ಕೋರನಹಳ್ಳಿ ಗ್ರಾಮದ ಒಳಗೆ ಹಾದು ಹುಣಸಘಟ್ಟ ಮಾರ್ಗದಲ್ಲಿ ಚಲಿಸುತ್ತಿರುವಾಗ ರಸ್ತೆಯ ಮಧ್ಯದಲ್ಲಿ ಸೇತುವೆ ಇದ್ದು ಎದುರಿನಿಂದ ಲಾರಿ ಬರುವುದು ಕಾಣಿಸಿದೆ. ಸೇತುವೆ ಮೇಲೆ ಕೇವಲ ಒಂದು ವಾಹನ ಮಾತ್ರ ಚಲಿಸುವಷ್ಟು ಸ್ಥಳಾವಕಾಶ ಇದ್ದ ಪರಿಣಾಮ ಲಾರಿಗೆ ಜಾಗಕೊಟ್ಟು ಸೇತುವೆಗಿಂತ ಹಿಂದೆಯೇ ಕಾರು ನಿಲ್ಲಿಸಿಕೊಂಡಿದ್ದರು.
ಎದುರಿನಿಂದ ಬಂದ ಲಾರಿ ಕಾರನ್ನು ಹಾದು ತಿರುವು ತೆಗೆದುಕೊಳ್ಳುವ ಸಮಯದಲ್ಲಿ ಆಯ ತಪ್ಪಿದ ಬೋರ್ ಲಾರಿ ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಉರುಳಿ ಬಿದ್ದ ಸಮಯದಲ್ಲಿ ಲಾರಿಯಲಿದ್ದ ಕಬ್ಬಿಣದ ಪೈಪ್ ಗಳು ಕಾರಿನ ಮೇಲೆ ಬಿದ್ದಿದ್ದರಿಂದ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟರು.
ಬೋರ್ಲಾರಿ ಅಪಾರ ತೂಕ ಇರುವ ಪರಿಣಾಮ ಬೀರೂರು ಪೊಲೀಸರು ಕ್ರೇನ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರೂ ದೇಹ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಮೃತ ದರ್ಶನ್ ಕಳೆದ ಹಲವಾರು ವರ್ಷಗಳಿಂದ ಜೆಸಿಐ ಸದಸ್ಯನಾಗಿ, ಅಧ್ಯಕ್ಷನಾಗಿ ಪಟ್ಟಣ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಪಟ್ಟಣ ವ್ಯಾಪ್ತಿಯ ಎಲ್ಲರ ಜೊತೆ ಅಪಾರ ವಿಶ್ವಾಸ ಗಳಿಸಿಕೊಂಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಿದ್ದಾರೆ.