ಬೀರೂರು: ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಬೀರೂರಿನ ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘ, ಪುರಸಭೆ ಮತ್ತು ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪಾಯಿಂಟ್ ಆಧಾರದ ಹೊನಲು ಬೆಳಕಿನ ಕುಸ್ತಿಯಲ್ಲಿ ಶಿಕಾರಿಪುರದ ಪಂಕಜ್ಅವರನ್ನು ಮಣಿಸಿ, ಬೆಳಗಾವಿಯ ಆದಿತ್ಯ ಬೆಳ್ಳಿ ಗದೆಯನ್ನು ತಮ್ಮದಾಗಿಸಿಕೊಂಡರು.
ಪಟ್ಟಣದ ಕಿತ್ತೂರು ರಾಣಿಚೆನ್ನಮ್ಮ ಮೈದಾನದಲ್ಲಿ ಅಖಾಡಾ ಪೂಜೆಯೊಂದಿಗೆ ಆರಂಭಗೊಂಡ ಟೂರ್ನಿಯಲ್ಲಿ ರಾಜ್ಯದ ವಿವಿಧೆಡೆಯ ಪೈಲ್ವಾನರು ಭಾಗವಹಿಸಿದ್ದರು.
ನಡೆದ ಅಂತಿಮ ಹಣಾಹಣಿಯಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸಿದ ಆದಿತ್ಯ ಮತ್ತು ಪಂಕಜ್ ಸಮಬಲ ಪ್ರದರ್ಶಿಸಿದ್ದರು. ಫಲಿತಾಂಶ ನಿರ್ಧಾರವಾಗದ ಕಾರಣ ಅಂಪೈರ್ ಪಾಯಿಂಟ್ ಲೆಕ್ಕಾಚಾರದ ಕುಸ್ತಿ ಆಡುವಂತೆ ಸೂಚಿಸಿದರು.
ಎದುರಾಳಿಯನ್ನು ಸೋಲಿಸಲು ಇಬ್ಬರೂ ಪೈಲ್ವಾನರು ವಿವಿಧ ಪಟ್ಟುಗಳನ್ನು ಹಾಕುತ್ತಿದ್ದರೆ ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ, ಶಿಳ್ಳೆಯಿಂದ ಹುರಿದುಂಬಿಸಿ ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಪ್ರೋತ್ಸಾಹಿಸುತ್ತಿದ್ದರು. ಮೈ ನವಿರೇಳಿಸುವಂತಿದ್ದ ರೋಚಕ ಸೆಣಸಾಟಕ್ಕೆ ಕುಸ್ತಿ ಅಖಾಡ ಸಾಕ್ಷಿಯಾಯಿತು. ಕೊನೆಗೂ ಪಂಕಜ್ ಅವರನ್ನು ಪಾಯಿಂಟ್ ಆಧಾರದಲ್ಲಿ ಮಣಿಸಿದ ಆದಿತ್ಯ ಬೆಳ್ಳಿಗದೆ ಎತ್ತಿ ಹಿಡಿದರು.
ಬಂಗಾರದ ಪದಕಕ್ಕಾಗಿ ನಡೆದ ಇನ್ನೊಂದು ರೋಚಕ ಹಣಾಹಣಿಯಲ್ಲಿ ಬೊಮ್ಮನಹಳ್ಳಿಯ ಮಾರುತಿಯನ್ನು ಸೋಲಿಸಿದ ಶಿಕಾರಿಪುರದ ಸುಹಾಸ್ ಪದಕವನ್ನು ಪಡೆದರು.
ದಾವಣಗೆರೆಯ ಬಸವರಾಜ್ ಅವರನ್ನುಅಖಾಡದಲ್ಲಿಚಿತ್ ಮಾಡಿದ ಗುಲ್ಬರ್ಗಾದ ಸಿದ್ದಪ್ಪ ಬೆಳ್ಳಿಕಪ್ಪು ಗೆದ್ದರು. ದಿ. ಪ್ರದೀಪ್ಕರಡಿ ಪ್ರಶಸ್ತಿ, ಲಾರಿ ಮಾಲೀಕರು ಮತ್ತು ಚಾಲಕರ ಪ್ರಶಸ್ತಿ, ಶಿವಾಜಿ ಮರಾಠಾ ಸಮಾಜ ಪ್ರಶಸ್ತಿ, ವೀರಭದ್ರಸ್ವಾಮಿ ಪ್ರಶಸ್ತಿ, ಚೊಕ್ಕಾಪುರದಚೌಡೇಶ್ವರಿ ಪ್ರಶಸ್ತಿ, ಕಟ್ಟಡ ಕಾರ್ಮಿಕರ ಸಂಘದ ಪ್ರಶಸ್ತಿ, ಅಂಜುಮಾನ್ ಪ್ರಶಸ್ತಿ, ಭೋವಿ ಸಮಾಜ ಪ್ರಶಸ್ತಿ, ಮೈಲಾರಲಿಂಗೇಶ್ವರ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕನ್ನಡ ಸಂಘ ಪ್ರಶಸ್ತಿ, ಆಟೋಚಾಲಕರು ಮತ್ತು ಮಾಲೀಕರ ಸಂಘ ಪ್ರಶಸ್ತಿ, ಭಗೀರಥ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ವಿಜೇತ ಕುಸ್ತಿ ಪಟುಗಳಿಗೆ ನೀಡಲಾಯಿತು.
ಬೆಳಗಾವಿ, ದಾವಣಗೆರೆ, ಕಲಬುರಗಿ, ಶಿಕಾರಿಪುರ, ಮೈಸೂರು, ಇಂಡಿ, ಜಮಖಂಡಿ, ಧಾರವಾಡ ಮಾತ್ರವಲ್ಲದೆ ದೆಹಲಿ, , ಹರಿಯಾಣದಿಂದಲೂ ೧೫೦ ಕ್ಕಿಂತ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದರು.