ಚಿಕ್ಕಮಗಳೂರು: ದತ್ತಪೀಠದ ವಿವಾದಕ್ಕೆ ಸಂಬಂಧಿಸಿದಂತೆ 2018 ರಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿದ್ದ ವರದಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿರುವ ಕಾರಣ ಹಿಂದು ಸಮಾಜದಲ್ಲಿ ಸಂತಸ ಮನೆ ಮಾಡಿದೆ.
ಮಂಗಳವಾರ ಮಧ್ಯಾಹ್ನ ಹೈಕೋರ್ಟ್ ನ್ಯಾಯಾಧೀಶ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿ ನಾಗಮೋಹನ್ ದಾಸ್ ಸಮಿತಿ ವರದಿಯನ್ನಾಧರಿಸಿ 2018 ಮಾರ್ಚ್-19 ರಂದು ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಆದೇಶವನ್ನು ರದ್ದು ಪಡಿಸಿದೆ. ಈ ಮೂಲಕ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿದೆ. ಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸುವುದು ಸೇರಿದಂತೆ ಇತರೆ ವಿಚಾರಗಳಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ತಿಳಿಸಿದೆ.
ಈ ವಿಚಾರ ಹೊರಬೀಳುತ್ತಿದ್ದಂತೆ ಹಿಂದುಪರ ಸಂಘಟನೆಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅತೀವ ಸಂತಸ ಹಂಚಿಕೊಳ್ಳುತ್ತಿದ್ದಾರೆ. ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್ ದತ್ತಪೀಠಕ್ಕೆ ಮೌಲ್ವಿ, ಮುಜಾವರ್ರಿಂದ ಮುಕ್ತಿ ಸಿಗುವ ಕಾಲಬಂದಿದೆ. ಸದ್ಯದಲ್ಲೇ ಹಿಂದು ಅರ್ಚಕರ ನೇಮಕ ಆಗಲಿದೆ. ಹೈಕೋರ್ಟ್ ಆದೇಶ ಸಂಘಟನೆ ಹೋರಾಟ, ಶಕ್ತಿ ಮತ್ತು ಭಕ್ತಿಗೆ ಸಂದ ಜಯ ಎಂದಿದ್ದಾರೆ.
ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಹಿಂದುಗಳು ಹಾಗೂ ಬಜರಂಗದಳಕ್ಕೆ ಸಿಕ್ಕ ಗೆಲುವು ಎಂದು ಸಂಘಟನೆಯ ರಾಜು ಕೋಟೆ ಹರ್ಷ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಹಿಂದು ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಸರ್ಕಾರ ಕೂಡಲೇ ಈ ವಿಚಾರದಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಶಿ ಆಲ್ದೂರು ಸಂತಸ ಹಂಚಿಕೊಂಡು, ಹಿಂದೂ ಸಂಘಟನೆಗಳ ಹೋರಾಟದ ಫಲವಾಗಿ ಈ ಆದೇಶ ಹೊರಬಿದ್ದಿದೆ. ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿರುವ ಒಳ್ಳೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲಿದೆ ಎನ್ನುವ ವಿಶ್ವಾಸವಿದೆ. ಇನ್ನುಮುಂದೆ ಇದೊಂದು ಹಿಂದೂಗಳ ಶ್ರದ್ಧಾಕೇಂದ್ರವಾಗಿ ಉಳಿದಿಕೊಳ್ಳಲಿದೆ ಎಂದಿದ್ದಾರೆ.
ಕಳೆದ ಮೂರು ದಶಕಗಳಿಂದ ಧರ್ಮದ ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಇದೊಂದು ಸಂತೋಷ, ಸಂಭ್ರಮದ ದಿನ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಹೇಳಿದ್ದಾರೆ.
ದತ್ತಾತ್ರೇಯರ ಪಾದುಕೆಗಳು ಮತ್ತು ಅನುಸೂಯ ದೇವಿಗೆ ಹಿಂದೂ ಅರ್ಚಕರಿಂದ ಪೂಜೆ ಸಲ್ಲುತ್ತದೆ ಎನ್ನುವುದು ಹಿಂದುಗಳ ಭಾವನೆ ಮತ್ತು ಧರ್ಮ ಹಾಗೂ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ನ ಈ ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ. ಪೀಠ ಪೂರ್ಣ ಪ್ರಮಾಣದಲ್ಲಿ ಹಿಂದುಗಳ ಸುಪರ್ದಿಗೆ ಸಿಗುವವರೆ ಹೋರಾಟ ನಡೆಯುತ್ತದೆ. ಮುಂದಿನ ದಿನದಲ್ಲಿ ನ್ಯಾಯಾಲಯದಲ್ಲಿ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.