ಚಿಕ್ಕಮಗಳೂರು: ಹಿಂದುಗಳ ಪವಿತ್ರ ಸ್ಥಾನ ಶ್ರೀ ಗುರು ದತ್ತಾತ್ರೇಯ ಪೀಠದ ಪೂಜೆಗೆ ನಾಗಮೋಹನ್ ದಾಸ್ ವರದಿ ಅನ್ವಯ ಮುಸ್ಲಿಂ ಮೌಲ್ವಿ ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018 ಮಾರ್ಚ್ 19ರಂದು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ ಇಂದು ಹೈಕೋರ್ಟ್ ನೀಡಿರುವ ತೀರ್ಪುನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪಿಗೆ ಸಂತೋಷ ತಂದಿದೆ. ಗೌರವಾನ್ವಿತ ನ್ಯಾಯಪೀಠದ ಆದೇಶ ಸಮಸ್ತ ಹಿಂದುಗಳ ಧಾರ್ಮಿಕ ಭಾವನೆಗಳ ಗೌರವವನ್ನು ಎತ್ತಿಹಿಡಿದಂತಾಗಿದೆ ಎಂದಿದ್ದಾರೆ.
ಮೌಲ್ವಿಯನ್ನು ದತ್ತಾತ್ರೇಯ ಪೀಠಕ್ಕೆ ನೇಮಿಸಿದ್ದು ಸರಿಯಾದ ಕ್ರಮವಾಗಿರಲಿಲ್ಲ.
ಹೀಗಾಗಿ ಈ ನೇಮಕವನ್ನು ಪ್ರಶ್ನಿಸಿ ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿಗೆ ಇಂದು ಹೈಕೋರ್ಟ್ ನಿಂದ ನ್ಯಾಯಸಿಕ್ಕಿರುವುದು ನ್ಯಾಯಾಂಗದ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ಈ ತೀರ್ಪನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.