ಮಂಗಳೂರು: ಈ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರ ವರುಣಾ, ಕನಕಪುರದಂತೆ ಪುತ್ತೂರು ಕ್ಷೇತ್ರವೂ ರಾಜ್ಯಮಟ್ಟದಲ್ಲಿ ಗಮನಸೆಳೆದಿದೆ. ವರುಣಾ, ಕನಕಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೋರಾಟ, ಮಾತು ಪ್ರತಿಮಾತು, ಜಟಾಪಟಿ ಕಾರಣದಿದ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ ಕರಾವಳಿಯ ಪುತ್ತೂರು ಬೇರೆಯದೇ ಕಾರಣಕ್ಕೆ ಗಮನಸೆಳೆದಿದೆ. ಇಲ್ಲಿ ಹಿಂದುತ್ವದ ತಳಹದಿಯ ಬಿಜೆಪಿಗೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಸೋಲಿನ ರುಚಿ ತೋರಿಸಲು ಸಿದ್ಧವಾಗಿದ್ದಾರೆ.
ಈ ನಿಟ್ಟಿನಲ್ಲಿ ಮತದಾನ ಬಳಿಕ ಸ್ವತಃ ಅಲ್ಲಿನ ಜನರೇ ಅರುಣ್ ಪುತ್ತಿಲ ಜಯಗಳಿಸುತ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದು, ಪುತ್ತಿಲ ಅಭಿಮಾನಿಗಳಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ.
ಬ್ಯಾಟ್ ಹಿಡಿದು ಕ್ರೀಸ್ ಗೇಲ್ ರೀತಿಯಲ್ಲಿ ಅಬ್ಬರಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಈ ಸಲ ಗೆಲುವು ನಮ್ಮದೇ ಅನ್ನುವ ಮುನ್ಸೂಚನೆ ನೀಡಿದ್ದಾರೆ. ಹಿಂದುತ್ವದ ಅಸ್ತ್ರ ಹಿಡಿದು ಕಣಕ್ಕೆ ಇಳಿದ ಪುತ್ತಿಲ ಕಮಾಲ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ನಿಂತಿರುವ ಅರುಣ್ ಪುತ್ತಿಲ ಹಿಂದುತ್ವದ ಹೆಸರಿನಲ್ಲಿ ಅತೀ ಹೆಚ್ಚು ಮತಗಳಿಸುವ ಸಾಧ್ಯತೆ ಇದೆ. ಇದಕ್ಕೆ ಇಂಬು ನೀಡುವಂತೆ ಮೊನ್ನೆ ನಡೆದಿರುವ ಅವರ ರೋಡ್ ಶೋನಲ್ಲಿ ಇಪ್ಪತ್ತೈದು ಸಾವಿರಕ್ಕೂ ಅಧಿಕ ಅಭಿಮಾನಿಗಳು, ಕಾರ್ಯಕರ್ತರು ನೆರೆದಿದ್ದಾರೆ. ಪುತ್ತಿಲಗೆ ಜಯಘೋಷ ಪುತ್ತೂರಿನ ರಸ್ತೆಯುದ್ದಕ್ಕೂ ಮಾರ್ಧನಿಸಿದ್ದನ್ನು ಜನ ಇನ್ನೂ ಮರೆತಿಲ್ಲ.
ಕಟೀಲ್ಗೆ ಹಿಂದುತ್ವದ ಪಾಠ ಕಲಿಸಲಿದ್ದಾರೆ ಪುತ್ತೂರಿನ ಜನ : ಪುತ್ತಿಲ ಗೆದ್ದರೆ ಕಾರ್ಯಕರ್ತರೇ ಹೇಳುವ ಪ್ರಕಾರ ಹಿಂದುತ್ವ ಗೆಲ್ಲುತ್ತದೆ. ಪುತ್ತೂರಿನಿಂದ ಇಡೀ ಕರ್ನಾಟಕಕ್ಕೆ ಹಿಂದುತ್ವ ಕರಾವಳಿಯಲ್ಲಿ ಎಷ್ಟು ಗಟ್ಟಿಯಾಗಿದೆ ಅನ್ನುವ ಸಂದೇಶ ತಲುಪುತ್ತದೆ. ಹಿಂದೂ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಬಿಜೆಪಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಈಗಾಗಲೇ ರಾಜ್ಯ ಬಿಜೆಪಿಯ ಅಧ್ಯಕ್ಷ ಹಾಗೂ ಹಾಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಹಲವಾರು ಕಾರ್ಯಕರ್ತರು ತೀವ್ರ ಅಸಮಾಧಾನ ಹೊಂದಿದ್ದಾರೆ. ಈ ಸೇಡನ್ನು ಪುತ್ತೂರಿನಲ್ಲಿ ಪುತ್ತಿಲ ಅವರನ್ನು ಗೆಲ್ಲಿಸುವ ಮೂಲಕ ತೀರಿಸಿಕೊಳ್ಳುವ ಸಾಧ್ಯತೆ ಇದೆ
ಬಿಜೆಪಿ ಅಭ್ಯರ್ಥಿ ಗೆಲುವು ಡೌಟ್: ಬಿಜೆಪಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ಎಡವಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮುಖ್ಯವಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ನಿರ್ಲಕ್ಷಿಸಿದ್ದೇ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ ಎಂದೇ ಹೇಳಲಾಗುತ್ತಿದೆ.