ಕಾರವಾರ: ಆಡಳಿತದ ವಿಕೇಂದ್ರೀಕರಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡುವ ಅವಶ್ಯಕತೆಯಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುಮಟಾದ ಮಣಕಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕ್ರೀಡೋತ್ಸವ- ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಹೊಳಪು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ವಿಧಾನಸಭೆ, ಲೋಕಸಭೆಯನ್ನಷ್ಟೇ ನೋಡದೇ ನಮ್ಮ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯನ್ನು ಜನರಿಗೆ ತಲುಪಿಸುವಲ್ಲಿ ಶ್ರಮವಹಿಸಿದ್ದೀರಿ, ಜನರ ಅಗತ್ಯತೆಗಳನ್ನು ಪೂರೈಸಲು ತಮಗೆ ಬೇಕಾದ ಶಕ್ತಿಗಳನ್ನು ನೀಡುವಲ್ಲಿ ಸರಕಾರ ನಿಮ್ಮ ಜೊತೆಗಿದೆ ಎಂದರು.
ಸಾರ್ವಜನಿಕರು ಇಂದು ಜಿಲ್ಲೆಯ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಜನರು ನಿರಾಶೆಯ ಭಾವದಲ್ಲಿದ್ದಾರೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 100 ಮೀ ಓಟ, 200 ಮೀ ಓಟ, ಗುಂಡು ಎಸೆತ, ಇಂಗ್ ಇನ್ ದಿ ವಿಕೇಟ್, ಮಡಿಕೆ ಒಡೆಯುವುದು, ಥ್ರೋ ಬಾಲ್, ಹಗ್ಗಜಗ್ಗಾಟ, ಛದ್ಮವೇಷ, ಗಾಯನ ಸ್ಫರ್ಧೆಗಳ ಜೊತೆಗೆ ಜಿಲ್ಲೆಯ ಉತ್ತಮ ಗ್ರಾ.ಪಂ ಆಯ್ಕೆ, ಗಾಂಧಿ ಗ್ರಾಮ ಪುರಸ್ಕಾರ ಪಡೆದವರನ್ನು ಗೌರವಿಸಲಾಗುವುದು. ಸಮಗ್ರ ಅಭಿವೃದ್ಧಿ ಮಾಡಿದ ಪಂಚಾಯತ, ಸಂಪನ್ಮೂಲ ಕ್ರೂಢೀಕರಣ ಮಾಡಿದ ಪಂಚಾಯತ, ಉದ್ಯೋಗ ಖಾತ್ರಿಯಲ್ಲಿ ಸಾಧನೆ ಮಾಡಿದ ಪಂಚಾಯತ, ಸ್ಮಶಾನದ ಉತ್ತಮ ನಿರ್ವಹಣೆ ಮಾಡಿದ ಪಂಚಾಯತಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ಬಳಿಕ ಕುಮಟಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ರವರು ಪಥಸಂಚಲನಕ್ಕೆ ಚಾಲನೆ ನೀಡಿದರು, ವಿಧಾನ ಪರಿಷತ ಶಾಸಕರಾದ ಶಾಂತಾರಾಮ ಸಿದ್ಧಿ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ರವರು ಧ್ವಜಾರೋಹಣವನ್ನು ನೆರವೇರಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ರವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾರಂಭದಲ್ಲಿ ಎಲ್ಲ ಗ್ರಾಮ ಪಂಚಾಯತಗಳಿಂದಲು ವಿವಿಧ ಆಕರ್ಷಕ ಟ್ಯಾಬ್ಲೋದ ಮೂಲಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಖಂಡೂ , ಪೋಲಿಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಡಿಡಿಪಿಐ ಈಶ್ವರ ನಾಯ್ಕ, ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.