ಕಾರವಾರ: ಕೊಂಕಣ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಭೂ ಕಬಳಿಕೆಯಾಗಿ 30 ವರ್ಷ ಕಳೆದರೂ ಈವರೆಗೆ ಸೂಕ್ತ ಪರಿಹಾರ ನೀಡಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹಾರವಾಡ, ಸಕಲಬೇಣ ಗ್ರಾಮದ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಭೂ ಸ್ವಾಧೀನ ಕಾಯಿದೆ 1894ರ ಅಡಿಯಲ್ಲಿ ಕೊಂಕಣ ರೈಲ್ವೆ ಯೋಜನೆಗೆ ಭೂ ಸ್ವಾಧೀನಗೊಂಡ ಜಮೀನುಗಳ ಪರಿಯಾರ ವಿಷಯಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡು ಶೀಘ್ರವೇ ಪರಿಹಾರ ನೀಡಿವಂತೆ ಆಗ್ರಹಿಸಿದ್ದಾರೆ.
ಕೊಂಕಣ ರೈಲ್ವೆ ನಿಗಮವೂ ಈ ಹಿಂದೆ ವಿವಿಧ ಹಳ್ಳಿಗಳಲ್ಲಿ ಯೋಜನೆಗೆ ಅವಶ್ಯ ಇರುವ ಜಮೀನುಗನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕರ್ನಾಟಕ ಭೂಸ್ವಾಧೀನ ಕಾಯ್ದೆ ಕಲಂ 18ರ ಅನ್ವಯ ದಾಖಲಿಸಿದ ಹಲವಾರು ಪ್ರಕಣಗಳು ಕುಮಟಾದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಕೈಗೊಂಡು ತೀರ್ಮಾನ ಮಾಡಿದೆ. ಆದರೆ ಅಂಕೋಲಾ ತಾಲೂಕಿನ ಹಾರವಾಡ ಹಾಗೂ ಸಕಲಬೇಣ ಗ್ರಾಮದ ಜಮೀನುಗಳ ಸಿವಿಲ್ ನ್ಯಾಯಾಲಯದ ಪ್ರಕರಣ ಸಂಖ್ಯೆ 313/2006ರಲ್ಲಿ ಆದ ಅವಾರ್ಡಿನ ಪ್ರಕಾರ ಹಾರವಾಡ ಹಾಗೂ ಸಕಲಬೇಣ ಗ್ರಾಮದ ನಿರಾಶ್ರಿತರು ಹಾಗೂ ಇತರರು ಭೂ ಸ್ವಾಧೀನ ಕಾಯ್ದೆ ಕಲಂ 28(ಅ) ಅನ್ವಯ ಜಿಲ್ಲಾಧಿಕಾರಿಗಳಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಗಳು ಸಹಾಯಕ ಆಯುಕ್ತರು ಹಾಗೂ ಕುಮಟಾದ ಕೊಂಕಣ ರೈಲ್ವೆ ವಿಶೇಷ ಭೂಸ್ವಾಧೀನಾಧಿಕಾರಿ ಕಾರ್ಯಾಲಯದಲ್ಲಿದೆ. ಈ ಹಿಂದೆ ಕೆಲವು ಪ್ರಕರಣಗಳನ್ನು ವಿಚಾರಣೆ ನಡೆಸುವುದಾಗಿ ವಿಚಾರಣಾ ನೋಟಿಸ್ ಸಹ ನೀಡಿದೆ.
ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ಕೆಲವು ವರ್ಷಗಳು ಕಳೆದರೂ ಪ್ರಕರಣದ ವಿಚಾರಣೆಗಾಗಿ ಯಾವುದೇ ನೋಟಿಸು, ನಿರಾಶ್ರಿತರಿಗೆ ಪ್ರಕರಣದ ಅರ್ಜಿದಾರರಿಗೆ ಈವರೆಗೆ ಪರಿಹಾರ ನೀಡಿಲ್ಲ. ನಿರಾಶ್ರಿತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ಈಗಾಗಲೇ 30 ವರ್ಷ ಕಳೆದಿದೆ. ಪರಿಹಾರ ಬರಬೇಕಾದವರು ಬಹುತೇಕ ನಿರಾಶ್ರಿತರು ಆರ್ಥಿಕವಾಗಿ ಬಡವರಾಗಿದ್ದಾರೆ. ಈ ಬಗ್ಗೆ ಕುಮಟಾದ ವಿಶೇಷ ಭೂ ಸ್ವಾಧೀನಾಧಿಕಾರಿ, ಸಹಾಯಕ ಆಯುಕ್ತರಲ್ಲಿ ಸಾಕಷ್ಟು ಸಲ ಮನವಿ, ವಿನಂತಿ ಮಾಡಿದರೂ ನ್ಯಾಯ ಕಲ್ಪಿಸಿಲ್ಲ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ 28 (ಅ) ಪ್ರಕರಣಗಳ ಬಗ್ಗೆ ಗಮನಹರಿಸಿ ಶೀಘ್ರವೇ ವಿಚಾರಣೆ ಕೈಗೊಂಡು ಪ್ರಕರಣದ ಅರ್ಜಿದಾರರಿಗೆ ಮತ್ತು ಅವರ ಅವಲಂಬಿತರಿಗೆ ನ್ಯಾಯ ಒದಗಿಸಿ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗಿದೆ. ಮನವಿ ಸಲ್ಲಿಸುವ ನಿಯೋಗದಲ್ಲಿ ಹಾರವಾಡದ ಸಂದೀಪ ಗೌಡ, ಮೀಲಿಂದ್ ಕುಲಕರ್ಣಿ, ಶ್ರೀಧರ ನಾಯ್ಕ, ರಮೇಶ ನಾಯ್ಕ, ಮನೋಹರ ನಾಯ್ಕ, ಶಿಲ್ಪಾ ನಾಯ್ಕ ಹಾಗೂ ಇನ್ನಿತರರು ಇದ್ದರು.