ಕಾರವಾರ: ಧರ್ಮಕ್ಕೆ ಕಟ್ಟುಬೀಳದೆ ಸಾಹಿತ್ಯದ ಸಂವೇದನೆಯ ಒಲವು ಮೂಡಿಸಿಕೊಂಡರೆ ಎಲ್ಲವೂ ಪರಿಪೂರ್ಣವಾಗುತ್ತದೆ. ಸಾಹಿತಿಗಳನ್ನು ಜಾತಿ, ಮತದ ಪರಿಮಿತಿಯಲ್ಲಿ ನೋಡದೆ ಸಾಹಿತ್ಯದ ಪರಿಮಿತಿಯಲ್ಲಿ ನೋಡಬೇಕು ಎಂದು ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ. ರಾಮಕೃಷ್ಣ ಗುಂದಿ ಹೇಳಿದರು.
ನಗರದ ಜಿಲ್ಲಾರಂಗಮಂದಿರ (ದಿ. ಪ್ರಭಾಕರ್ ರಾಣೆ ವೇದಿಕೆ)ದಲ್ಲಿ ನಡೆದ 7ನೇ ಕಾರವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದ ಮನಸ್ಸುಗಳಿಗೆ ಕೊರತೆ ಇಲ್ಲ. ಆದರೆ ಯುವ ಸಾಹಿತ್ಯದ ಮನಸ್ಸುಗಳಿಗೆ ಕೊರತೆ ಇದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಸಾಹಿತ್ಯ ಪರಿಷತ್ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಧಕರ ಮನೆಗೆ ಸಾಹಿತ್ಯ ಪರಿಷತ್, ಶಾಲೆಗಳತ್ತ ಸಾಹಿತಿಗಳು, ಸಾಹಿತ್ಯದಲ್ಲಿ ಯಕ್ಷಗಾನ, ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹೀಗೆ ಸಾಹಿತ್ಯದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಸಾಹಿತ್ಯ ಪರಿಷತ್ನ್ನಾಗಿ ಮಾಡಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಪ್ರಾಸ್ತಾವಿಕ ಭಾಷಣ ಮಾಡುವ ಸಂದರ್ಭದಲ್ಲಿ ಕನ್ನಡ ಶಾಲೆಗಳ ಸ್ಥಿತಿಯನ್ನು ಸಭೆಗೆ ತಿಳಿಸುವಾಗ ಅವರು ಗದ್ಗದಿತರಾದರು. ಉಮ್ಮಳಿಸಿ ಬಂದ ದುಃಖವನ್ನು ತಡೆದುಕೊಂಡು ಮಾತು ಮುಂದುವರಿಸಿದರು. ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನು ಆಹ್ವಾನಿಸಲು ಗಡಿಭಾಗದ ಶಾಲೆಗಳಿಗೆ ಹೋಗಿದ್ದೆ. ಶಾಲೆಗಳಿಗೆ ಉತ್ತಮವಾದ ಕಟ್ಟಡಗಳಿಗೆ ಆದರೆ, ವಿದ್ಯಾರ್ಥಿಗಳಿಲ್ಲ. ಒಂದೊಂದು ಶಾಲೆಯಲ್ಲಿ 6, 7, 8 ವಿದ್ಯಾರ್ಥಿಗಳ ಸಂಖ್ಯೆಗಳಿವೆ. ಗಡಿಯಲ್ಲಿ ಕನ್ನಡಕ್ಕೆ ಬಂದಿರುವ ಸ್ಥಿತಿಯನ್ನು ಕಂಡು ನೋವು ಎನಿಸಿತು ಎಂದರು.