ಕಾರವಾರ: ಕಳೆದ ಮೂರು ತಿಂಗಳಿನಿಂದ ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರೂ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಗ ಪ್ರೀತಿಸಿ ಹುಡುಗಿ ಮನೆಯವರ ಮೇಲೆ ಅನುಮಾನಗಳಿದ್ದು ಈ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ ಕಾಣೆಯಾದ ಮಗನನ್ನು ಹುಡುಕಿಕೊಡುವಂತೆ ನಾಪತ್ತೆಯಾದ ಯುವಕನ ತಂದೆ ಅನಂತ್ ಸುಬ್ರಾಯ್ ಸಿದ್ದಿ ಆಗ್ರಹಿಸಿದ್ದಾರೆ.
ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು, ನನ್ನ ಮಗ ಸಚಿನ್ ಸಿದ್ದಿ ಬೆಂಗಳೂರಿನಲ್ಲಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಮೂರು ತಿಂಗಳ ಹಿಂದೆ ಆಕೆಯ ಮನೆಗೆ ಬಂದವನು ನಾಪತ್ತೆಯಾಗಿದ್ದಾನೆ. ಯುವತಿ ಕುಟುಂಬದವರು ಹಾಗೂ ಆತನ ಸ್ನೇಹಿತರು ಜೀವಕ್ಕೆ ಅಪಾಯಮಾಡಿರುವ ಅನುಮಾನಗಳಿದೆ ಎಂದು ಆರೋಪಿಸಿದರು.
ಮಗ ಕಾಣೆಯಾದಾಗ ಈ ವಿಷಯವನ್ನು ನಮಗೆ ತಿಳಿಸದೆ ಅವರೇ ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಮಗೆ ತಿಂಗಳ ಬಳಿಕ ಮಗನ ಸುಳುವು ಇಲ್ಲದ ಕಾರಣ ಅ.೧೪ ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಈವರೆಗೂ ಮಗ ಏನಾಗಿದ್ದಾನೆ ಎಂಬುದರ ಬಗ್ಗೆ ಸುಳುವು ಇಲ್ಲ ಎಂದು ದೂರಿದರು. ಮಗ ಯುವತಿ ಮನೆಯಲ್ಲಿಯೇ ಹೆಚ್ಚು ಇರುತ್ತಿದ್ದ. ಆತ ದುಡಿದ ಹಣವನ್ನು ಹಾಗೂ ಅವರ ಮನೆಗೆ ಬೇಕಾಗಿರುವ ವಸ್ತುಗಳನ್ನು ತಂದುಕೊಡುತ್ತಿದ್ದ. ಯುವತಿ ಕೂಡ ಗಾಯಗೊಂಡಿದ್ದರಿಂದಲೇ ಈತನೇ ನೆರವು ನೀಡಿದ್ದ. ಆದರೆ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಆತ ಆಕೆಯ ಮನೆಗೆ ಬೇಟಿ ನೀಡುವ ದಿನ ಮನೆಯವರಿಗೆ ಕಾಲ್ ಮಡಿದ್ದಾನೆ. ಆದರೆ ಸಂಜೆ ವೇಳೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ನೀಡಿ ಮಗನ ಪತ್ತೆಗೆ ಆಗ್ರಹಿಸಲಾಗಿದೆ ಎಂದು ಹೇಳಿದರು. ಈ ವೇಳೆ ನಾಗರಾಜ ಸಿದ್ದಿ, ವಿನುತಾ ಸಿದ್ದಿ, ಹರಿಹರ ಸಿದ್ದಿ, ನೀಲಾ ಸಿದ್ದಿ, ಕಮಲಾ ಸಿದ್ದಿ, ವೆಂಕಟರಮಣ ಸಿದ್ದಿ, ಲಲಿತಾ ಸಿದ್ದಿ, ಮಹೇಂದ್ರ ಮರಾಠಿ, ಅಚಿವೆ ಗ್ರಾ.ಪಂ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ ಇದ್ದರು.