ಕಾರವಾರ: ಹಳಿಯಾಳದ ಸಕ್ಕರೆ ಕಾರ್ಖಾನೆ (ಇಐಡಿ ಪ್ಯಾರಿ) ಬ್ರಿಟಿಷ್ ನೀತಿ ಅನುಸರಿಸುತ್ತಿದೆ. ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಕಬ್ಬು ಬೆಳೆಗಾರ ರೈತರಿಂದ ಕೇಳಿಬಂದವು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಳಿಯಾಳ, ಮುಂಡಗೋಡ, ಧಾರವಾಡದ ಕೆಲವು ರೈತರ ಸಮಸ್ಯೆಗಳನ್ನು ಆಲಿಸಿದರು.
ಕಳೆದ 18 ದಿನಗಳಿಂದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಹೋರಾಟ ನಡೆಯುತ್ತಿದೆ.ಈ ನಿಟ್ಟಿನಲ್ಲಿನ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾರವಾರದ ಡಿಸಿ ಕಚೇರಿಯಲ್ಲಿ ಸಭೆ ಮಾಡದೆ, ಹಳಿಯಾಳದಲ್ಲಿ ಸಭೆ ಮಾಡಬೇಕು ಎನ್ನುವ ಬೇಡಿಕೆ ರೈತರದ್ದಾಗಿದ್ದರಿಂದ ಅನೇಕ ಕಬ್ಬು ಬೆಳೆಗಾರರು ಸಭೆಯಲ್ಲಿ ಭಾಗಿಯಾಗಿಲ್ಲ.
ಸಭೆಯಲ್ಲಿ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಹಳಿಯಾಳ, ಧಾರವಾಡ ಸೇರಿದಂತೆ ವಿವಿಧ ಕಡೆಯ ಕಬ್ಬು ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕಳೆದ 18 ದಿನಗಳಿಂದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಕಬ್ಬಿನ ದರಕ್ಕೆ ಸಂಬಂಧಿಸಿದಂತೆ ನ್ಯಾಯ ಮತ್ತು ಮಲ್ಯಾಧಾರಿತ ದರ (ಎಫ್ಆರ್.ಸಿ) ಕಡಿಮೆ ಇದೆ.
ಹೋರಾಟದಿಂದ ಕಾರ್ಖಾನೆಗೆ ತೊಂದರೆ ನೀಡುವ ಉದ್ದೇಶ ಇಲ್ಲ. ಎಫ್.ಆರ್.ಸಿ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯವನ್ನು ರೈತ ಮುಖಂಡರು ಮಾಡಿದರು. ಈ ಸಂದರ್ಭದಲ್ಲಿ ಅಶೋಕ ಮೇಟಿ ಅವರು ಮಾತನಾಡಿ ಸರಕಾರದ ಆದೇಶ ಪಾಲನೆ ಮಾಡಿಲ್ಲ. ಇಂತಿಷ್ಟು ಕಿ.ಮೀ.ಗೆ ಇಷ್ಟು ದರ ನೀಡಬೇಕು ಎಂದು ಆದೇಶ ಆಗಿದೆ. ಆದರೆ ಆದೇಶ ಪಾಲನೆ ಆಗಿಲ್ಲ. ಪ್ರತಿ ಟನ್ ಗೆ 305 ರೂ ನೀಡಬೇಕು ಎಂದು ಈ ಹಿಂದಿನ ಡಿಸಿ ಅವರ ನೇತೃತ್ವಲ್ಲಿ ಸಭೆ ಮಾಡಿ ಠರಾವು ಸಹ ಮಾಡಲಾಗಿತ್ತು.
ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ರೈತ ಮುಖಂಡ ನಾಗೇಂದ್ರ ಜಿವೋಜಿ ಅವರು ಮಾತನಾಡಿ ಕಂಪನೆಯಿಂದ ಪಾರದರ್ಶಕವಾಗಿ ರಿಕವರಿ ಆಗುತ್ತಲ್ಲ. ಮೊದಲು ಎಷ್ಟು ಕಬ್ಬು ನುರಿಸಿದ್ದೇವೆ ಎನ್ನುವ ಮಾಹಿತಿ ನೀಡುತ್ತಿದ್ದರು. ಆದರೆ ಈಗ ಯಾವುದೇ ಮಾಹಿತಿ ನೀಡುತ್ತಿಲ್ಲ. ಸರಾಸರಿ ಇಳುವರಿ ಬರುತ್ತಿಲ್ಲ. ನಮ್ಮಗೆ ನ್ಯಾಯ ನೀಡಿ. ಅನ್ಯಾಯುತವಾಗಿ ಹಣ ಕಡಿತ ಮಾಡಿದ್ದಾರೆ. ಮಾಡಿದ್ದಾರೆ. ಸದ್ಯದ ಆದೇಶ ದೋಷಯುಕ್ತ ವಾಗಿದ್ದು ಕಾರ್ಖಾನೆ ಪರವಾಗಿ ಆದೇಶವಾಗಿದೆ. ಎಲ್ಲ ರೀತಿಯಲ್ಲೂ ಬೆಲೆ ಏರಿಕೆಯಾಗಿದ್ದು ರೈತರಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಅಧ್ಯಕ್ಷ ನಿಜಗುಣಿ ಕೆಲಗೇರಿ ಅವರು ಮಾತನಾಡಿ ಎಲ್ಲ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 1700 ಕೂಲಿ ದರ ನೀಡಬೇಕು. ಆಯಾ ಭಾಗದ ರೈತರನ್ನು ಕರೆಸಿ ಚರ್ಚೆ ಮಾಡಬೇಕಾದ ಅವಶ್ಯಕತೆ ಇದೆ. ಆದೇಶ ಮರು ಪರಿಶೀಲನೆ ಮಾಡಿ. ರೈತರ ಎಚ್ಎಂಟಿ ಗೊಂದಲ ನಿವಾರಿಸಿ. ಸೂಕ್ತ ನಿರ್ದೇಶನ ನೀಡಿ.. ಹಿಂದೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ 305 ರೂ ನೀಡುವುದಾಗಿ ಕಂಪನೆ ಠರಾವು ಆಗಿತ್ತು ನೀಡಿಲ್ಲ ಆದೇಶ ಪಾಲನೆ ಆಗುತ್ತಿಲ್ಲ ಎಂದರು.