ಕಾರವಾರ: ಮನೆ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಪಡಿತರ ಚೀಟಿ ಹೀಗೆ ಯಾವುದೇ ಸಾರ್ವಜನಿಕ ಸಮಸ್ಯೆ ಇದ್ದರೂ ಆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಅವರು ತಾಲ್ಲೂಕಿನ ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಜನಸ್ಪಂದನ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮನೆಗಳ ನಿರ್ಮಾಣಕ್ಕೆ ನಾಲ್ಕು ವರ್ಷಗಳ ಹಿಂದೆ ಸರ್ಕಾರದಿಂದ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಆದರೆ ಇದುವರೆಗೆ ಬಾಕಿ ಹಣ ಬಿಡುಗಡೆಯಾಗಿಲ್ಲ. ಇದು ನನ್ನ ಗಮನಕ್ಕೆ ಇದೆ. ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಬಯಸುವವರು. ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮನೆ ನಿರ್ಮಾಣಕ್ಕೆಜಾಗವಿದ್ದು, ಮನೆ ದುರಸ್ಥಿಯ ಅವಶ್ಯಕತೆ ಇದ್ದಲ್ಲಿ ಅಂತಹವರು ಮನೆ ನಿರ್ಮಾಣಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿ, ಕೆರವಡಿ ಗ್ರಾಮಕ್ಕೆ ಎಷ್ಟು ಮನೆಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಪಡಿತರ ಚೀಟಿಯ ಸಮಸ್ಯೆ ಏನೆ ಇದ್ದರೂ ತಕ್ಷಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬಗೆಹರಿಸುತ್ತಾರೆ. ಪಡಿತರ ಚೀಟಿ ಸಮಸ್ಯೆಗಳಿದ್ದರೆ ಅಗತ್ಯ ದಾಖಲೆಗಳನ್ನು ಪಡೆದು ತಹಶೀಲ್ದಾರರ ಕಚೇರಿಯಲ್ಲಿ ಸರಿಪಡಿಸಲು ಅವಕಾಶವಿದೆ ಎಂದರು.
ಎಸ್ಸಿ ಕಾಲೋನಿಯಲ್ಲಿ ಕುಡಿಯುವ ನೀರಿಗಾಗಿ ಜೆಜೆಎಂ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರನ್ನು ಸರಿಯಾಗಿ ಪೂರೈಸಿ. ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಬಾವಿ ಅವಶ್ಯಕತೆ ಇರುವಲ್ಲಿ ಮಾಹಿತಿಯನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯವಾಗಿರುವ ದೇವಳಮಕ್ಕಿ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇಲ್ಲಿಯೇ ಒಬ್ಬ ವೈದ್ಯರ ನೇಮಕ ಮಾಡಲಾಗಿದೆ. ತುರ್ತು ಚಿಕಿತ್ಸೆ ಪಡೆಯಲು ಜನರಿಗೆ ಅನುಕೂಲವಾಗುತ್ತದೆ. ಹಾಗೂ ಇಲ್ಲಿಯೇ ಒಂದು ಆಂಬ್ಯುಲೆನ್ಸ್ಇರುವುದರಿಂದ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪಿಂಚಣಿ,ವಿಧವಾ ವೇತನ,ವಿಶೇಷ ಚೇತನರ ಸಹಾಯ ಧನ, ವೃದ್ಧಾಪ್ಯ ವೇತನ ನೀಡುವ ಯೋಜನೆಯನ್ನುಸರ್ಕಾರ ಜಾರಿಗೆ ತಂದಿದೆ. ಅದರಿಂದ ವಂಚಿತರಾದವರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.
ಕೆರವಡಿಯಲ್ಲಿ ಅಂಗನವಾಡಿ ಕಟ್ಟಡವನ್ನು ಉತ್ತಮವಾಗಿ ನಿರ್ಮಿಸಿದ್ದಾರೆ. ಮಕ್ಕಳು ಹಾಗೂ ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸಲು ನಾನು ಸದಾ ಸಿದ್ಧಳಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತರಬಹುದು.ಕೆರವಡಿ ಊರಿನ ಮೂಲೆ ಮೂಲೆಯಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.ಮಂಗಳವಾರ ಸುಮಾರು 2 ಕೋಟಿ ರೂ. ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕಾಮಗಾರಿಯೂ ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕದ್ರಾ ಜಲಾಶಯದ ಮೇಲ್ಭಾಗದಿಂದ ಜನರಿಗೆ ಕುಡಿಯುವ ನೀರು ಒದಗಿಸಲು ಯೋಜನೆಯನ್ನು ರೂಪಿಸಲಾಗಿದೆ. ಇದು ಯಶಸ್ವಿಯಾದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಜೆಜೆಎಂ ಕಾಮಗಾರಿಯನ್ನು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಚವನ್ನು ಭರಿಸಿದ ಪ್ರಮಾಣ ಪತ್ರವನ್ನು ಫಲಾನುಭವಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೀಪಾ ನಾಯ್ಕ, ಉಪಾಧ್ಯಕ್ಷರು ರಾಮಚಂದ್ರ ನಾಯ್ಕ, ಸದಸ್ಯರಾದ ಬಾಲಚಂದ್ರ ಕಾಮತ, ಸುನಂದಾ ಹುಲಸ್ವಾರ, ಸುಮಂಗಲಾ ಕಾಂಬಳೆ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ತಹಶೀಲ್ದಾರ ಎನ್.ಎಫ್.ನರೋನ, ತಾಪಂ.ಇಒ ಆನಂದಕುಮಾರ ಬಾಲಪ್ಪನವರ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.