ಕಾರವಾರ: ಬಿಲ್ ಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗುತ್ತಿಗೆದಾರರಿಂದ ಬುಧವಾರ ಹಮ್ಮಿಕೊಳ್ಳಲು ನಿರ್ಧರಿಸಿದ್ದ ಧರಣಿಯನ್ನ ಅಧಿಕಾರಿಗಳ ಭರವಸೆಯಿಂದಾಗಿ ಮೊಟಕುಗೊಳಿಸಿ, ಮನವಿ ಸಲ್ಲಿಸುವ ಮೂಲಕ ಸರ್ಕಾರದ ಗಮನಕ್ಕೆ ತರಲಾಯಿತು.
ಲೋಕೋಪಯೋಗಿ ಇಲಾಖೆಗಳಲ್ಲಿ, ನಗರ ಸಭೆ ಮತ್ತು ವಿವಿಧ ಇಲಾಖೆಗಳಲ್ಲಿ 2022-2023ನೇ ಸಾಲಿನ ಹಣಕಾಸಿನ ಅವಧಿಯಲ್ಲಿ ಗುತ್ತಿಗೆದಾರರು ಕಾಮಗರಿಗಳನ್ನು ಪೂರ್ಣಗೊಳಿಸಿ ವರ್ಷ ಕಳೆಯುತ್ತ ಬಂದರು ಬಿಲ್ಲುಗಳು ಪಾವತಿಯಾಗಿರಲಿಲ್ಲ. ಇದರಿಂದಾಗಿ ಗುತ್ತಿಗೆದಾರರು ಅಸಮಾಧಾನಗೊಂಡಿದ್ದರು. ಜೊತೆಗೆ ಕಾಮಗಾರಿಗಳನ್ನ ಪ್ಯಾಕೇಜ್ ಮಾಡುವುದು ಸೇರಿದಂತೆ ಗುತ್ತಿಗೆ ಕಾಮಗಾರಿ ಹಂಚಿಕೆಯಲ್ಲೂ ಉಂಟಾಗಯತ್ತಿರುವ ತಾರತಮ್ಯದ ಕುರಿತು ರೋಸಿ ಹೋಗಿದ್ದರು.ಇದರಿಂದಾಗಿ ಏ.8ರಂದು ಸಭೆ ಸೇರಿದ್ದ ಗುತ್ತಿಗೆದಾರರು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಧರಣಿಗೆಂದು ನಗರಸಭೆಗೆ ತೆರಳಿದ್ದ ಗುತ್ತಿಗೆದಾರರಿಗೆ, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಧರಣಿ ನಡೆಸದಂತೆ ಅಧಿಕಾರಿಗಳು ಗುತ್ತಿಗೆದಾರರಲ್ಲಿ ಕೋರಿದರು. ಜೊತೆಗೆ ಗುತ್ತಿಗೆದಾರರು ಎದುರುಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲೇ ಗುತ್ತಿಗೆದಾರರ ಸಭೆ ಕರೆಯುವ ಬಗ್ಗೆಯೂ ಭರವಸೆ ನೀಡಿದ್ದರಿಂದ ಸಾಂಕೇತಿಕ ಧರಣಿಯನ್ನು ಮೊಟಕುಗೊಳಿಸಿ, ಮನವಿ ಸಲ್ಲಿಸುವಿಕೆಗೆ ಸೀಮಿತಗೊಳಿಸಲಾಯಿತು.
ಮನವಿಯನ್ನು ನಗರಸಭೆಯ ಆಯುಕ್ತರಾದ ಉದಾಯಕುಮಾರ ಶೆಟ್ಟಿ, ಹಾಗೂ ಲೋಕೋಪಯೋಗಿ ಇಲಾಖೆಯ ಕಾರವಾರ ವಿಭಾಗದ ಲೆಕ್ಕ ಅಧೀಕ್ಷರಾದ ಶಿವಪ್ರಸಾದ್ ರವರೆಗೆ ಮನವಿ ಸಲ್ಲಿಸಿ ಗುತ್ತಿಗೆದಾರರಿಗೆ ಮಾರ್ಚ್ ತಿಂಗಳಲ್ಲಿ ಆಗುವ ಆರ್ಥಿಕ ತೊಂದರೆ, ಬ್ಯಾಂಕುಗಳಿಗೆ ಬಡ್ಡಿ ತುಂಬಲೂ ಸಾಧ್ಯವಾಗದೇ ಎದುರಿಸುವ ಸಮಸ್ಯೆ, 50 ಲಕ್ಷ ರೂ. ಕಡಿಮೆ ಮೊತ್ತದ ಕಾಮಗಾರಿಗೆ ಹೊರಗಿನ ತಾಲೂಕಿನ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸುತ್ತಿದ್ದಾರೆ, ಈ ಬಗ್ಗೆ ಗುತ್ತಿಗೆದಾರರಾದ ನಾವೇ ಇಡೀ ರಾಜ್ಯಾದ್ಯಂತ ಆಯಾ ತಾಲೂಕಿನ ಗುತ್ತಿಗೆದಾರರು 50 ಲಕ್ಷದ ಒಳಗಿನ ಟೆಂಡರಿಗೆ ಬಾಗವಹಿಸಬಹುದು, 50 ಲಕ್ಷ ಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಯಾರು ಬೇಕಾದರೂ ಭಾಗವಹಿಸಿ ಕಾಮಗಾರಿ ಮಾಡಬಹುದು ಎಂದು ನಿಯಮ (ಒಳ ಒಪ್ಪಂದ) ಮಾಡಿಕೊಂಡರೂ ಕೆಲವರು ನಿಯಮ ಉಲ್ಲಂಘಿಸಿ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ, ಅಂತವರಿಗೆ ನಮ್ಮ ಸಂಘ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಏ.17ರಂದು ಜಿಲ್ಲಾ ಗುತ್ತಿಗೆದಾರ ಸಂಘದ ಸಭೆ ನಡೆಯಲಿದ್ದು, ಮುಂದಿನ ನಡೆಯ ಬಗ್ಗೆ ಅಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿರುವ ಗುತ್ತಿಗೆದಾರರು, ಶೀಘ್ರವಾಗಿ ಗುತ್ತಿಗೆದಾರರ ಬಾಕಿ ಇರುವ ಬಿಲ್ ಪವತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಅನಿಲ್ ಮಾಳಸೇಕರ, ನಿತಿನ್ ಕೊಳಂಬ ಕರ, ರಾಮ ಜೋಶಿ, ರೂಪೇಶ. ಆರ್. ನಾಯ್ಕ, ವಿಜಯ್. ಅ. ಬಿಲಿಯೇ, ಪ್ರಮೋದ್ ಸಾಗೇಕರ, ಸುನಿಲ ಸೈಲ, ಉದಯ.ವಿ. ಕಲಗೂಟಕರ, ರವೀಂದ್ರ. ವಿ. ಕೇರಕರ, ಸೋಮನಾಥ.ಡಿ. ಪರುಲೇಕರ, ಭೋಜರಾಜ. ದೊರೆಸ್ವಾಮಿ, ದೀಪಕ. ಕೆ. ನಾಯ್ಕ, , ಸಂತೋಷ ಸೈಲ, ಸತೀಶ. ವಿ. ನಾಯ್ಕ, ರೋಹಿದಾಸ ಕೋಠಾರಕರ ಹಾಗೂ ಇನ್ನಿತರರು ಇದ್ದರು.