ಕಾರವಾರ: ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಆರ್. ವಿ. ದೇಶಪಾಂಡೆ ಅವರು 2023 ರ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು.
ಆದರೆ ತಾವು ಕೊಟ್ಟ ಮಾತಿಗೆ ತಪ್ಪಿದ ದೇಶಪಾಂಡೆ ಅವರು ನನ್ನನ್ನು ಕಡೆಗಣಿಸಿ ಪುನಃ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಷ್ಟು ಸಾಲದೆಂಬಂತೆ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ತಿಳಿದ ನಂತರ ನನ್ನ ಮೇಲೆ ಪ್ರಕರಣ ದಾಖಲಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಎಲ್. ಘೋಟ್ನೇಕರ ಅವರು ಆದರೂ ಇವುಗಳನ್ನೆಲ್ಲ ಬದಿಗೊತ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಾಗಿ ಮುಂದೆ ಬಂದಿದ್ದೇನೆ ಎಂದರು.
ದಾಂಡೇಲಿ ನಗರದಲ್ಲಿ ಜೆಡಿಎಸ್ ಪಕ್ಷದ ದಾಂಡೇಲಿ ತಾಲೂಕಾ ಕಚೇರಿ ಉದ್ಘಾಟಿಸಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಡುತ್ತಿದ್ದ ಅವರು, ಕಳೆದ 40 ವರ್ಷಗಳಿಂದ ಶಾಸಕ ದೇಶಪಾಂಡೆ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದೇನೆ. ಅವರ ಏಳು ಗೆಲುವಿನಲ್ಲಿ ಅಪಾರವಾಗಿ ಶ್ರಮಿಸುತ್ತ ಅಣ್ಣ ತಮ್ಮಂದಿರಿಗಿಂತ ಮೀಗಿಲಾಗಿ ನಡೆದುಕೊಂಡಿದ್ದೇನೆ. ಆದರೂ ಈ ಬಾರಿ ಹಳಿಯಾಳ ಕ್ಷೇತ್ರದಿಂದ ನನಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ತಪ್ಪಿಸಲಾಗಿದೆ ಎಂದು ಖೇದ ವ್ಯಕ್ತಪಡಿಸಿದ ಘೋಟ್ನೇಕರ ಅವರು ಕ್ಷೇತ್ರದ ಹಳ್ಳಿ ಭಾಗಗಳಲ್ಲಿ ಕಳೆದ 40 ವರ್ಷಗಳಿಂದ ನಾನು ಸಾಕಷ್ಟು ಜನಸಾಮಾನ್ಯರ ಸೇವೆ ಮಾಡಿದ್ದೇನೆ, ಗ್ರಾಮೀಣ ಭಾಗದಲ್ಲಿ ನನ್ನ ಕಾರ್ಯ ವ್ಯಾಪ್ತಿ ಹೆಚ್ಚಾಗಿದ್ದರಿಂದ ದಾಂಡೇಲಿಯಲ್ಲಿ ಸಂಘಟನೆ ಮಾಡಲು ಇದುವರೆಗೂ ಸಾಧ್ಯವಾಗಿರಲಿಲ್ಲ. ದಾಂಡೇಲಿಯಲ್ಲಿ ಇದು ನನ್ನ ಮೊದಲ ರಾಜಕೀಯ ಸಭೆ. ನನಗೂ ಶಾಸಕನಾಗಬೇಕೆಂಬ ಆಕಾಂಕ್ಷೆ ಇದೆ. ಮತದಾರ ಬಾಂಧವರು ನನಗೆ ಹೆಚ್ಚಿನ ಮತ ನೀಡಿ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ವಿನಂತಿಸಿದರು. ದಾಂಡೇಲಿ ಜಡಿಎಸ್ ಘಟಕದ ತಾಲೂಕಾಧ್ಯಕ್ಷ ಅಕ್ರಮ ಖಾನ್ ಅವರು ತಮ್ಮ ಭಾಷಣದುದ್ದಕ್ಕೂ ಶಾಸಕ ದೇಶಪಾಂಡೆ ಅವರ ಮೇಲೆ ಹರಿಹಾಯ್ದು ಅವರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ರಾಹುಲ ಬಾವಾಜಿ ಮಾತನಾಡುತ್ತ ಈ ಬಾರಿಯ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದ ನಮ್ಮ ನೆಚ್ಚಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಸ್. ಎಲ್. ಘೋಟ್ನೆಕರ ಅವರಿಗೆ ದಾಂಡೇಲಿ ಜನರು ಹೆಚ್ಚಿನ ಮತ ನೀಡಿ ಸಹಕರಿಸಬೇಕೆಂದು ವಿನಂತಿಸಿದರು.
ಗುಂದ ಗ್ರಾಮದ ಸರಸರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ಅವರು ಮಾತನಾಡುತ್ತ ಇನ್ನೂ 15 ದಿನಗಳೊಳಗೆ ದಾಂಡೇಲಿಯಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಈ ನಡುವೆ ದಾಂಡೇಲಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಜನರು ಘೋಟ್ನೇಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಶ್ವನಾಥ ಜಾದವ, ಸಂದೀಪ ದೇಶಭಂಡಾರಿ, ದಿನೇಶ ಹಳದುಕರ, ಗುರ್ಜರ್, ಶ್ರೀಕಾಂತ ಘೋಟ್ನೇಕರ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.