ಕಾರವಾರ: ಗುತ್ತಿಗೆದಾರರು ಎದುರಿಸುತ್ತಿರುವ ಜೆಲ್ಲಿಕಲ್ಲು, ಉಸುಕು (sand problem )ಹಾಗೂ ಮಣ್ಣಿನ ಸಾಮಗ್ರಿಗಳ ಸಮಸ್ಯೆ ಬಗೆಹರಿಸುವಂತೆ ಹಾಗೂ ಮರಳುಗಾರಿಕೆಗೆ ಪರವಾನಿಗೆ ನೀಡುವ ಮೊದಲು ಸಭೆ ನಡೆಸುವಂತೆ ತಾಲೂಕ ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಮಾಧವ ನಾಯಕ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಗುತ್ತಿಗೆದಾರರು ಮರಳು ಸಮಸ್ಯೆಯ ಬಗ್ಗೆ ಚರ್ಚಿಸಿದರು. ಕರಾವಳಿ ಪ್ರದೇಶದಲ್ಲಿ ಉಸುಕು ಹೇರಳವಾಗಿ ಸಿಗುತ್ತದೆ.
ಅದರಲ್ಲಿಯೂ ಕಾರವಾರದ ಕಾಳಿ ನದಿ ಮತ್ತು ಅರಣ್ಯ ಸಮುದ್ರದ ಸಂಗಮ ಪ್ರದೇಶ ಹಾಗೂ ಈ ಭಾಗದ ಇತರೆ ಪ್ರದೇಶದಲ್ಲಿ ಎಷ್ಟೇ ಉಸುಕು ತೆಗೆದರೂ ಮತ್ತೆ ಅಷ್ಟೇ ಶೇಖರಣೆಯಾಗುತ್ತದೆ. ಆದರೆ ಕೆಲವು ವರ್ಷಗಳಿಂದ ಉಸುಕು ತೆಗೆಯಲು ಅವಕಾಶ ನೀಡದಿರುವುದರಿಂದ ಉಸುಕಿನ ದಿಬ್ಬಗಳು ನಿರ್ಮಾಣವಾಗಿ ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು ಅಕ್ಕಪಕ್ಕ ವಾಸಿಸುವವರ ಜೀವನ ಅಸ್ತವ್ಯಸ್ಥವಾಗುತ್ತಿದೆ. ಆದ್ದರಿಂದ ತಕ್ಷಣ ಪರವಾನಿಗೆ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಮರಳಿನ ಸಮಸ್ಯೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯಾಗಿದೆ. ಗುತ್ತಿಗೆದಾರರಿಗೆ ಹೊಸ ಅಭಿವೃದ್ಧಿ ಕೆಲಸ ನಿರ್ವಹಿಸುವ ಬಗ್ಗೆ ಕಾರ್ಯಾದೇಶ ನೀಡಲಾಗಿದೆ.
ಈಗಾಗಲೇ ಕಾರ್ಯಾದೇಶ ಪಡೆದ ಗುತ್ತಿಗೆದಾರರು ರಸ್ತೆ, ಕಟ್ಟಡ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗಳನ್ನು ಬೇಕಾದ ಸಾಮಗ್ರಿಗಳ ಅಲಭ್ಯತೆಯಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಇನ್ನೊಂದೆಡೆ ಗುತ್ತಿಗೆದಾರರರ ಟೆಂಡರ್ ನಿಯಮಗಳಲ್ಲಿ ನೀಡಿರುವ ಅವಧಿಯೂ ಮುಗಿಯುತ್ತಾ ಬಂದಿದ್ದು ಬಹಳ ತೊಂದರೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅನಿಲಕುಮಾತ ಮ್ಹಾಳ್ಸೇಕರ, ಛತ್ರಪತಿ ಮ್ಹಾಳ್ಸೇಕರ, ಮನೋಜ ನಾಯ್ಕ, ಪ್ರಸಾದ ಕಾಣೇಕರ, ರಾಜೇಶ ಶೇಟ್ ಸೇರಿದಂತೆ ಹಲವರು ಇದ್ದರು.