ಕಾರವಾರ: ಸಹಸ್ರಾರು ಬೆಂಬಲಿಗರೊಂದಿಗೆ ಶಾಸಕಿ ರೂಪಾಲಿ ನಾಯ್ಕ ಅವರು ಆಗಮಿಸಿ ಎರಡನೇ ಅವಧಿಗೆ ಆಯ್ಕೆ ಬಯಸಿ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಶಾಸಕಿ ರೂಪಾಲಿ ನಾಯ್ಕ ಅವರು ನಾಮಪತ್ರ ಸಲ್ಲಿಸಿಕೆ ಪೂರ್ವದಲ್ಲಿ ನಗರದ ಮಾಲಾದೇವಿ ಮೈದಾನದಿಂದ ಮೆರವಣಿಗೆ ಆಯೋಜಿಸಲಾಗಿತ್ತು.
ಮೆರವಣಿಗೆ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಸಹಸ್ರಾರು ಜನರು ಬೆಂಬಲ ತೋರ್ಪಡಿಸಲು ಆಗಮಿಸಿದ್ದರು. ಮಾಲಾದೇವಿ ಮೈದಾನದಿಂದ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಬಳಿಕ ನಗರಸಭೆ ಕಚೇರಿಯ ಸಭಾಭವನದಲ್ಲಿ ತೆರೆಯಲಾಗಿದ್ದ ಚುನಾವಣಾ ಕಚೇರಿಗೆ ಶಾಸಕಿ ರೂಪಾಲಿ ನಾಯ್ಕ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಪ್ರಮೋದ ಮದ್ವರಾಜ್, ಎಂಎಲ್ಸಿ ಗಣಪತಿ ಉಳ್ವೇಕರ್ ಇನ್ನು ಕೆಲವರು ತೆರಳಿ ನಾಮಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹಿಂದಿನ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಅಭಿವೃದ್ಧಿ ಮಾಡಿದಂತೆ ಮೋದಿ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವು ರಾಜ್ಯದಲ್ಲಿ ಅಭಿವೃದ್ಧಿ ಮಾಡಿದೆ. ಹಾಗೆಯೇ ಕಾರವಾರ ಕ್ಷೇತ್ರದಲ್ಲೂ ರೂಪಾಲಿ ನಾಯ್ಕ ಅವರು ಅಭೂತಪೂರ್ವ ಅಭಿವೃದ್ಧಿಯನ್ನು ಮಾಡಿದ್ದಾರೆ. ಸ್ವತಃ ತಾನೇ ವಿಕ್ಷಣೆ ಮಾಡಿದ್ದೇನೆ ಎಂದರು. ಡಬಲ್ ಎಂಜಿನ್ ಸರ್ಕಾರದಿಂದಾಗಿ ನಿಮ್ಮ ನೆರೆಯ ಗೋವಾ ರಾಜ್ಯವು ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಸಾಧಿಸಿದೆ ಎನ್ನುವುದನ್ನು ನೀವು ಗೋವಾಕ್ಕೆ ಹೋದಾಗಲೆಲ್ಲ ನೋಡಿಕೊಂಡು ಬನ್ನಿ ಎಂದು ಅವರು ತಿಳಿಸಿದರು.
ಮೋದಿ ಅವರ ನೇತೃತ್ವದಲ್ಲಿ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬಿಜೆಪಿಗೆ ಎಲ್ಲೆಡೆಯಿಂದ ಅಪಾರ ಬೆಂಬಲ ಸಿಗುತ್ತಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ವಿಶ್ವಾನಾಥ ಕಾರಿಡಾರ ನಿರ್ಮಾಣದಿಂದಾಗಿ ಈ ಕಲಿಯುಗದಲ್ಲೂ ಸತ್ಯಯುಗದ ಝಲಕ್ ನೋಡಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ಕೊರೊನಾ ಮತ್ತು ಪ್ರವಾಹದಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಇದರ ನಂತರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರಿಂದ ಕಾರವಾರ ಮತ್ತು ಅಂಕೋಲಾ ಕ್ಷೇತ್ರದಲ್ಲಿ ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗಿವೆ ಎಂದು ಶಾಸಕರು ತಿಳಿಸಿದರು.
ಕಾರ್ಯಕರ್ತರು ಮತ್ತು ಮತದಾರರು ನನ್ನ ಪಾಲಿನ ದೇವರು. ಇಂದಿಲ್ಲಿ ನೆರೆದಿರುವ ಕಾರ್ಯಕರ್ತರ ಮತ್ತು ಮತದಾರರ ಉತ್ಸಾಹ ನೋಡಿ ಕಣ್ಣಲ್ಲಿ ನೀರು ಬಂತು. ಅವರ ಆಶೀರ್ವಾದ ಇರುವುದರಿಂದಲೇ ನನಗೆ ಪಕ್ಷದ ಎರಡನೇ ಬಾರಿಗೆ ಟಿಕೆಟ್ ನೀಡಿದೆ. ಅವರಿಗೆ ನಾನು ಋಣಿಯಾಗಿದ್ದೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು. ದೇಶದಲ್ಲಿ ಪ್ರಧಾನಿ ಮೋದಿ ಅವರ ಹವಾ ಇದೆ ಎಂದು ಯಾರೂ ನಿರ್ಲಕ್ಷ್ಯ ಮಾಡಬಾರದು ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ಹೋಗಿ ನಿಮ್ಮ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂದು ಕೇಳಿದಾಗ ನಿಮಗೆ ನೀಡಿರುವ ಕರಪತ್ರದಲ್ಲಿರುವ ವಿಷಯವನ್ನು ಅವರಿಗೆ ತಿಳಿಸಬೇಕು ಎಂದು ಶಾಸಕರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.