ಕಾರವಾರ: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಕಾರವಾರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಉತ್ತರಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮೊಟ್ಟೆ ಎಸೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿವೃಷ್ಟಿ ಗುಡ್ಡ ಕುಸಿತ ಆಗಿದ್ದ ಕೊಡಗು ಜಿಲ್ಲೆಯ ಕುಶಾಲ ನಗರದ ಸಮೀಪದ ಗುಡ್ಡೆ ಹೂಸುರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ.
ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಇದಕ್ಕೆ ಸರಕಾರದ ಭದ್ರತಾ, ಪೊಲೀಸ್ ವೈಫಲ್ಯವೇ ನೇರ ಜವಾಬ್ದಾರಿ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಆದಷ್ಟು ಬೇಗ ಜೈಲಿಗೆ ಕಳುಹಿಸುವ ಕ್ರಮ ಆಗಬೇಕು ಎಂದು ಮನವಿ ಮಾಡಿದ್ದಾರೆ. ಇಂಥ ಪ್ರಕರಣ ಬೇರೆ ಯಾವುದೇ ಜಿಲ್ಲೆಯಲ್ಲಿ ಆಗಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ತಪ್ಪಿತಸ್ಥ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ತಕ್ಕ ಶಿಕ್ಷೆ ಆಗಬೇಕು.
ಈ ಬಗ್ಗೆ ಕ್ರಮಕೈಗೊಳ್ಳದೆ ಇದ್ದರೆ ಯುವ ಕಾಂಗ್ರೆಸ್ ಮತ್ತು ಪಕ್ಷದ ಹಿರಿಯ ಕಿರಿಯ ಮುಖಂಡರು ಸೇರಿ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಅಲಿ ಖುರೇಶಿ ಚೈತ್ರಾ ಕೋಟಾರಕರ್, ವಿಶ್ವನಾಥ್ ಕಲ್ಗುಟಕರ್,ದೇವಾನಂದ ಠಾಣೆಕರ, ಚಂದ್ರಕಾಂತ ನಾಯ್ಕ್, ಸ್ನೇಹಾ, ಸೈಯದ್ ಅಶ್ರಫ್ ಖಾದ್ರಿ,ಸೂರಜ್ ನಾಯ್ಕ್,ಅಜಯ್ ಸಿಗಲಿ,ಸಾಗರ್,ಚಿರಾಗ್, ಪ್ರತೀಕ್,ಈರಪ್ಪ, ಪರಶುರಾಮ್, ಧರ್ಮರಾಜ, ನಾಗರಾಜ್ ಗೌಡ ಇದ್ದರು