ಕಾರವಾರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತಂಡವು ಕೈಗಾ ಸೈಟ್ಗೆ ಭೇಟಿ ನೀಡಿ ಇಲ್ಲಿನ ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಯೋಜನೆಗಳ ಪರಿಶೀಲನೆ ನಡೆಸಿತು.
ಈ ತಂಡದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಮಲ್ ಕಿಶೋರ್, ಸದಸ್ಯ ರಾಜೇಂದ್ರ ಸಿಂಗ್, ಹಿರಿಯ ಸಲಹೆಗಾರ ಎಸ್. ಕೆ.ಘೋಷ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 10ನೇ ಬೆಟಾಲಿಯನ್ ಕಮಾಂಡೆಂಟ್ ಜಾಹಿದ್ ಖಾನ್, ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ತಂಡದ ಸದಸ್ಯ ದೀಪಕ್ ಓಜಾ, ಮುಖ್ಯಸ್ಥ ಡಾ. ಎಸ್.ಪಿ.ಲಕ್ಷಮಣನ್, ಎನ್ಪಿಸಿಐಎಲ್ ಕೇಂದ್ರ ಕಚೇರಿಯ ಕೆ.ಕೆ.ಡೇ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಉಪಸ್ಥಿತರಿದ್ದರು.
ತಂಡವು ಪ್ಲಾಟ್ ಸೈಟ್ನಲ್ಲಿಯ ಮುಖ್ಯ ನಿಯಂತ್ರಣ ಕೊಠಡಿ, ಟರ್ಬೈನ್ ಮಹಡಿ ಇತ್ಯಾದಿಗಳಿಗೆ ಭೇಟಿ ನೀಡಿತು. ಪರಿಸರ ಸಮೀಕ್ಷೆ ಲ್ಯಾಬ್ ಜೊತೆಗೆ ಕದ್ರಾ ಅಣೆಕಟ್ಟಿನ ಕೈಗಾ ಟೌನಶಿಪ್ನಲ್ಲಿರುವ ವಿಕಿರಣ ತುರ್ತು ವೈದ್ಯಕೀಯ ಕೇಂದ್ರ (ಕೈಗಾ ಆಸ್ಪತ್ರೆ) ಮತ್ತು ನಾಗರಿಕರ ಸುರಕ್ಷತೆಗಾಗಿ ಖಾತ್ರಿಪಡಿಸಲಾದ ಹಲವಾರು ಕ್ರಮಗಳನ್ನು ಪರಿಶೀಲಿಸಿತು.
ಕೈಗಾ ಸೈಟ್ನ ಸೈಟ್ ಡೈರಕ್ಟರ್ ರಾಜೇಂದ್ರ ಕುಮಾರ ಗುಪ್ತಾ ಮತ್ತು ಅವರ ತಂಡ ಹಾಗೂ ಎಇಆರ್ಬಿ ಅಧಿಕಾರಿಗಳೊಂದಿಗೆ ಪ್ರವಾಹ, ಭೂಕುಸಿತದಂತಹ ಇತರ ಅಪಾಯಗಳ ಸಂದರ್ಭದಲ್ಲಿ ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆಯ ಅಂಶಗಳ ಬಗ್ಗೆ ವಿವರವಾದ ಚರ್ಚೆಯನ್ನು ನಡೆಸಿತು.
ತಂಡವು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೊಂದಿಗೆ ಆಳವಾದ ಚರ್ಚೆಯನ್ನು ನಡೆಸಿ, ಕೈಗಾ ಸ್ಥಾವರದೊಂದಿಗೆ ಸಮನ್ವಯ ವ್ಯವಸೆಯನ್ನು ಪರಿಶೀಲಿಸಿತು. ಶೇ.100 ರಷ್ಟು ಸುರಕ್ಷತೆಯನ್ನು ಕಲ್ಪಿಸಲು ಕೈಗೊಳ್ಳಲಾದ ಎಲ್ಲಾ ಪ್ರಯತ್ನ ಮತ್ತು ವ್ಯವಸ್ಥೆಗಳಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯೋಗವು ಶ್ಲಾಘನೆಯನ್ನು ವ್ಯಕ್ತಪಡಿಸಿದೆ.