ಕಾರವಾರ: ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯನ್ನು ವಿವಾಹವಾಗಿ ಭಾರತಕ್ಕೆ ಕರೆ ತಂದ ಭಟ್ಕಳದ ಪತಿಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯವು ವಿಸಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಭಟ್ಕಳದ ಮೌಲಾನಾ ಆಜಾದ್ ರೋಡ್ನ ನಿವಾಸಿ ಮಹ್ಮದ್ ಇಲಿಯಾಸ್ ಹಾಗೂ ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಮಹ್ಮದ್ ಇಲಿಯಾಸ್ ಈತನು 2014 ರ ಜೂನ್ 17 ರಂದು ಸ್ಥಳೀಯ ಭಟ್ಕಳ ಪೊಲೀಸ್ ಠಾಣೆಗೆ ಹಾಗೂ ಕಾರವಾರದ ಎಫ್.ಆರ್.ಓ. ರವರಿಗೆ ಮಾಹಿತಿ ನೀಡದೇ ಪಾಕಿಸ್ತಾನಿ ಪ್ರಜೆಯಾದ ತನ್ನ ಪತ್ನಿಯನ್ನು ವೀಸಾ ವಿಸ್ತರಣೆಯ ಕುರಿತು ಭಟ್ಕಳದಿಂದ ದೆಹಲಿಗೆ ಕರೆದೊಯ್ದು ವಿದೇಶಿ ಕಾಯ್ದೆಯಂತೆ ವಿಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಭಟ್ಕಳ ನಗರ ಠಾಣೆಯ ಪಿಐ ಪ್ರಶಾಂತ ಎಸ್. ನಾಯಕ ಅವರು ಈ ಕುರಿತು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ ಅವರು ಆರೋಪಿ ಮಹ್ಮದ್ ಇಲಿಯಾಸ್ ಈತನಿಗೆ 1 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ಹಾಗೂ ಆರೋಪಿ ನಾಸಿರಾಳಿಗೆ 6 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ತನುಜಾ ವಿ. ಹೊಸಪಟ್ಟಣ ಅವರು ವಾದವನ್ನು ಮಂಡಿಸಿದ್ದರು.