ಕಾರವಾರ: ನಗರದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪಕ್ಕದಲ್ಲೇ ನೂತನವಾಗಿ ನಿರ್ಮಾಣವಾಗುತ್ತಿರುವ 450 ಹಾಸಿಗೆಯ ಆಸ್ಪತ್ರೆ ಕಟ್ಟಡವನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಕಾರವಾರಕ್ಕೆ ಮೊದಲ ಸಲ ಆಗಮಿಸಿದ ಅವರು ಕಿಮ್ಸ್ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಇನ್ನಿತರ ಕಾಮಗಾರಿ ಪರಿಶೀಲನೆ ನಡೆಸಿದರು. ಕಟ್ಟಡ ಕಾಮಗಾರಿ ನೀಲನಕ್ಷೆಯನ್ನು ಗಮನಿಸಿ, ಅಧಿಕಾರಿಳೊಂದಿಗೆ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದೊಳಗೆ ತೆರಳಿ ವಿವಿಧ ಹಂತದ ಕಾಮಗಾರಿ ಪರಿಶೀಲಿಸಿದ ಅವರು ಶೀಘ್ರವೇ ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ.
ಕಾರವಾರದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ವಿವಿಧ ಉನ್ನತ ಸೌಲಭ್ಯ ಕಲ್ಪಿಸುವುದು ಹಾಗೂ 160 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 450 ಬೆಡ್ ಗಳ ಆಸ್ಪತ್ರೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿದ ಜಿಲ್ಲಾಸ್ಪತ್ರೆಗೆ ತೆರಳಿದ ವಿವಿಧ ವಾರ್ಡ್ ಹಾಗೂ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಅವರು ಪರಿಶೀಲನೆ ನಡೆಸಿದ ಸಿಟಿ ಸ್ಕ್ಯಾನ್ ಹಳೆಯ ಮಿಷನ್ ಇಟ್ಟುಕೊಂಡಿದ್ದಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ವೈದ್ಯಾಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಕಾರವಾರದ ಜಿಲ್ಲಾಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುವ ವೇಳೆ ಸಿಟಿ ಸ್ಕ್ಯಾನ್ ವಿಭಾಗಕ್ಕೆ ತೆರಳಿದ ಸಚಿವರು, ಅಲ್ಲಿ ಸ್ಕ್ಯಾನಿಂಗ್ ಮಶೀನ್ ಪರಿಶೀಲಿಸಿದರು. ಈ ವೇಳೆ ಹೊಸ ಮಶೀನ್ ಇದ್ದರೂ ಹಳೆಯ ಮಶೀನ್ ಅನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಮಶೀನ್ ಯಾಕೆ ಇನ್ನೂ ಅಳವಡಿಸಿಲ್ಲ ಎಂದು ವೈದ್ಯಾಧಿಕಾರಿಗಳನ್ನ ಪ್ರಶ್ನಿಸಿದ ಡಾ.ಸುಧಾಕರ, ತರಾಟೆಗೆ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲಿ ಮಶೀನ್ ಅಳವಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಎಂ.ಎಲ್.ಸಿ. ಗಣಪತಿ ಉಳ್ವೇಕರ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಹಾಗೂ ಅಧಿಕಾರಿ ವರ್ಗದವರು ಇದ್ದರು.