ಕಾರವಾರ: ಹಳಿಯಾಳ ತಾಲೂಕಿನ ಬಿ.ಕೆ ಹಳ್ಳಿ ಗ್ರಾಮದ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ನಿಯಮದಂತೆ ೧೦೦ ದಿನಗಳ ನಿರಂತರ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿಕಾರ್ಮಿಕರ ಸಂಘಟನೆ (ಎ.ಐ.ಕೆ.ಕೆ.ಎಂ.ಎಸ್) ಜಿಪಂ ಸಿಇಓ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಸಂಘಟನೆಯ ಬಿ. ಕೆ. ಹಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳು ಜಿಪಂ ಕಚೇರಿಗೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಗ್ರಾಮೀಣ ಭಾಗದ ದುಡಿಯುವ ಬಡಜನರಿಗೆ ಅನೂಕೂಲವಾಗಲೆಂದು ಸರಕಾರವು ತಂದಿರುವ ನರೇಗಾ ಯೋಜನೆಯಲ್ಲಿ ಕೆಲಸ ಪಡೆಯಲು ಬಿ. ಕೆ. ಹಳ್ಳಿ ಗ್ರಾಮದ ಕೃಷಿ ಕೂಲಿಕಾರರು ಹರಸಾಹಸ ಪಡುತ್ತಿದ್ದಾರೆ.
ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಹಾಗೂ ತಾಲೂಕ ಪಂಚಾಯತಿಗೆ ನಿರಂತರವಾಗಿ ಕೆಲಸ ನೀಡುವಂತೆ ಹಲವು ಬಾರಿ ಕೇಳಿದರೂ ನಿರಂತರವಾಗಿ ನರೇಗಾ ಕೆಲಸ ನೀಡಿಲ್ಲ. ಕೆಲವು ದಿನಗಳು ಕೆಲಸ ನೀಡಿ, ಪಾರ್ ನಂ ೬ ತುಂಬಿದರೂ ಎನ್.ಎಮ್.ಆರ್. ತಗೆಯುವಲ್ಲಿ ವಿಳಂಬ ಮಾಡುತ್ತಾರೆ. ಆರ್ಥಿಕ ಸಂಕಷ್ಟವನ್ನು ನೀಗಿಸಲು, ಕುಟುಂಬದ ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಗ್ರಾಮದ ಜನರು ಪಟ್ಟಣದ ದಾರಿ ಹಿಡಿಯುವಂತಾಗಿದೆ. ಆದ್ದರಿಂದ ಈ ನಿರಂತರವಾಗಿ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ತಮ್ಮ ಬೇಡಿಕೆಗಳ ಕುರಿತ ಮನವಿಯನ್ನು ಜಿಪಂ ಸಿಇಓ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಸಂಚಾಲಕಿ ರೂಪಾ ಮೇತ್ರಿ, ಪದಾಧಿಕಾರಿಗಳಾದ ರೇಣುಕಾ ಗಾಡೇಕರ, ಶಂಕರ ಪೇಚಕಿ, ಅಂಬವ್ವ ಮೇತ್ರಿ, ದಾಮೋದರ ಮೇತ್ರಿ, ರಾಮು ಬರ್ಗುಂಡಿ, ಕುಮಾರ ತವರಿ ಮುಂತಾದವರಿದ್ದರು.