‘ಸಂಕ್ರಮಣ’ ಹಳೆಯದನ್ನು ಬಿಟ್ಟು ಹೊಸದರತ್ತ ಮುಖ ಮಾಡುವ ಸಂಕ್ರಾಂತಿ ಸಮಯ. ‘ಎಳ್ಳು ಬೆಲ್ಲ ಕೊಟ್ಟು ಒಳೆಯದನ್ನು ಮಾತಾಡೋಣ’ ಎನ್ನುವ ಸೌಹಾರ್ದತೆಯ ಹಬ್ಬ. ಚಳಿಗೆ ಮೈ ಮುದುಡಿ ಕುಳಿತ ಪೃಕೃತಿಗೆ ಹೊಸ ಚೈತನ್ಯ ನೀಡುವ ಸಂಕ್ರಾಂತಿ ನಾವಿನ್ಯತೆಯ ಪ್ರತೀಕ, ಮಾನವ ತನ್ನ ಹಿಂದಿನ ದ್ವೇಷ ಮರೆತು ಪರಸ್ಪರ ಕೂಡಿ ಬದುಕಬೇಕು ಎಂಬ ಸಂದೇಶವು ಎಳ್ಳು ಬೆಲ್ಲ ಕೊಡುವಿಕೆಯಲ್ಲಿ ಅಡಗಿದೆ. ನಮ್ಮ ಹಬ್ಬಗಳ ಮೂಲ ಉದ್ದೇಶ ಎಲ್ಲರನ್ನು ಹತ್ತಿರಕ್ಕೆ ತಂದು ‘ನಾನು ನಿಮಗಾಗಿ ನೀವು ನನಗಾಗಿ’ ಎಂಬ ಸಹಕಾರದಡಿ ಎಲ್ಲರೂ ಕೂಡಿ ಬದುಕುವ ಅರಿವು ಮೂಡಿಸುವುದೇ ಆಗಿದೆ. ನಾಡಿನ ಜನರಿಗೆ ನಮ್ಮ ಧಾರ್ಮಿಕ ಮತ್ತು ಸಂಸ್ಕೃತಿಗಳ ಪರಿಚಯ ಮಾಡುವುದರೊಂದಿಗೆ ಎಲ್ಲರನ್ನು ಒಟ್ಟಿಗೇ ಬೆಸೆಯುವ ಕೆಲಸವನ್ನು ಹಬ್ಬಗಳು ಮಾಡುತ್ತವೆ.
ಅವುಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪರಸ್ಪರರನ್ನು ಹತ್ತಿರ ತಂದು ಬೆಸೆಯುವ ಹಬ್ಬವೇ ಸಂಕ್ರಾಂತಿ, ಪಲ್ಲವಿತ ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳಲ್ಲಿ ಚೈತನ್ಯ ತರುವ ಪ್ರಕೃತಿಯಾರಾಧನೆಯ ಹಬ್ಬ, ಸುಗ್ಗಿಯ ಸಂಭ್ರಮದಲ್ಲಿರುವ ಅನ್ನದಾತರು ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುವ ಉತ್ಸವ. ಎಳ್ಳು-ಬೆಲ್ಲ- ಕೊಬ್ಬರಿ-ನೆಲಗಡಲೆ-ಕಬ್ಬು…. ರೈತರು ತಾವು ಬೆಳೆದದ್ದನ್ನೆಲ್ಲ ಪರಸ್ಪರ ಹಂಚಿ ತಿನ್ನುವುದರ ಜೊತೆಗೆ ಒಳೊಳ್ಳೆಯ ಮಾತುಗಳನ್ನು ಹಂಚಿಕೋಳ್ಳುವ ಪರ್ವ. ಒಟ್ಟಾರೆಯಾಗಿ ಇಡೀ ಪ್ರಕೃತಿಗೆ ಸಂಕ್ರಮಣ ತರುವ ಹಬ್ಬ ಸಂಕ್ರಾಂತಿ.
ಹೇಳಿ ಕೇಳಿ ಸಂಕ್ರಾಂತಿ ಸುಗ್ಗಿಹಬ್ಬ, ರೈತಾಪಿಗಳ ಹಿಗ್ಗಿನ ಹಬ್ಬ, ಇಂಥ ಸುಗ್ಗಿಗೆ-ಹಿಗ್ಗಿಗೆ ಆತ ಆಶ್ರಯಿಸಿರುವ ಜಾನುವಾರುಗಳೇ ಮೂಲ ಕಾರಣ. ಹಾಗಾಗಿ ಹೊಲ-ಗದ್ದೆಗಳಲ್ಲಿ ಬೆಳೆ ಬೆಳೆದು ಫಸಲೆಲ್ಲಾ ಮನೆ ತುಂಬಿ ತುಳುಕುವಾಗ ತನ್ನ ಸಮಕ್ಕೂ ದುಡಿದ ಮೂಕಪ್ರಾಣಿಗಳಾದ ಜಾನುವಾರುಗಳನ್ನು ಅಂದು ವಿಶೇಷವಾಗಿ ಬಹಳ ಕಾಳಜಿಯಿಂದ, ಪ್ರೀತಿಯಿಂದ ಕಾಣುವುದು ಸಂಕ್ರಾಂತಿ ಕೊಟ್ಟ ಉಡುಗೊರೆಯಾಗಿದೆ. ಅಂದು ವಿಶೇಷವಾಗಿ ಹಳ್ಳಿಗಾಡುಗಳಲ್ಲಿ ಗೋಪೂಜೆಮಾಡಿ ಸಂಭ್ರಮಿಸುತ್ತಾರೆ. ಅಂದು ಮುಂಜಾನೆಯೇ ಅವುಗಳನ್ನೆಲ್ಲಾ ಕೆರೆಕಟ್ಟೆಗಳಲ್ಲಿ ಮೀಯಿಸಿ, ಚೆನ್ನಾಗಿ ತೊಳೆಯುತ್ತಾರೆ. ನಂತರ ಮೈಗೆಲ್ಲಾ ಅರಿಶಿಣ ಬಳಿಯುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ವಿವಿಧ ರೀತಿಯಿಂದ ಅಲಂಕಾರ ಮಾಡಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡುತ್ತಾರೆ.
ನಂತರ ಬೀದಿಯಲ್ಲಿ ಭತ್ತದ ಹುಲ್ಲನ್ನು ಹರಡಿ ಅದಕ್ಕೆ ಬೆಂಕಿಹಾಕಿ ಹಸು-ಎತ್ತುಗಳನ್ನು ಅದರ ಮೇಲೆ ಹಾರಿಸುತ್ತಾರೆ. ಇದನ್ನೇ ಕಿಚ್ಚುಹಾಯಿಸುವುದು ಎನ್ನುವುದು. ಜಾನುವಾರುಗಳಿಗೆ ಹೀಗೆ ಮಾಡುವುದರಿಂದ ಚಳಿಯಲ್ಲಿ ಜಡ್ಡುಗಟ್ಟಿದ ಅವುಗಳು ಕ್ರಿಯಾಶೀಲಗೊಳ್ಳುತ್ತವೆ. ಜೊತೆಗೆ ಅವುಗಳ ಮೈಗಳಲ್ಲಿರುವ ಕ್ರಿಮಿಗಳೆಲ್ಲಾ ಕಿಚ್ಚು ಹಾಯಿಸುವುದರಿಂದ ಅವುಗಳ ಕ್ರಿಮಿಗಳೆಲ್ಲಾ ಹಾಯುವುದರಿಂದ ಎಲ್ಲವೂ ಬೆಂಕಿಯಲ್ಲಿ ಸುಟ್ಟು ನಾಶವಾಗುತ್ತವೆ. ಹೀಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಹಲವಾರು ಆರೋಗ್ಯಕರ ಆಚರಣೆಗಳಿದ್ದು ವಿಶೇವಾಗಿ ರೈತರು ಸಂಭ್ರಮಿಸುತ್ತಾರೆ.
ಸಂಕ್ರಾಂತಿ ಕಾಲದಲ್ಲಿ ಸ್ನಾನ, ದಾನ, ತಪಸ್ಸು, ಹೋಮ, ಪಿತೃತರ್ಪಣ, ದೇವತಾಪೂಜೆ ಇವುಗಳನ್ನು ಆಚರಿಸಿದಲ್ಲಿ ಅದು ಪುಣ್ಯಕರವಾದುದು ಎಂದು ಬ್ರಹ್ಮ ಪುರಾಣದಲ್ಲಿ ಹೇಳಿದೆ. ಮಕರ ಸಂಕ್ರಮಣದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣ ಪ್ರತೀತಿಯಿದೆ. ಮಕರ ಸಂಕ್ರಾಂತಿಯ ಆಚರಣೆಯಲ್ಲಿ ಪಾಪ ನಿವಾರಣೆಯ ಕಲ್ಪನೆಯ ಜೊತೆ ಜೊತೆಗೆ ಭೌಗೋಳಿಕ ಮಹತ್ವವೂ ಇದೆ. ಮಕರ ಸಂಕ್ರಮಣದ ಕಾಲದಿಂದ ದಿನಮಾನ ದೊಡ್ಡದಾಗುವುದರ ಜೊತೆಗೆ ಸೃಷ್ಟಿಯಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಸೃಷ್ಟಿಯಲ್ಲಿ ಸೊಬಗು ಮೈದುಂಬಿಕೊಳ್ಳುತ್ತದೆ. ಭೂಮಿ, ದವಸ-ಧಾನ್ಯಗಳ ಪೂಜೆ, ರಥೋತ್ಸವಗಳ ಸಂಭ್ರಮದ ಆಚರಣೆ, ಎಳ್ಳು ಬೆಲ್ಲಗಳ ವಿನಿಮಯ, ಎಳ್ಳು ಬೆಲ್ಲ ಸ್ವೀಕರಿಸಿ ಒಳ್ಳೆ ಮಾತನಾಡಬೇಕೆಂಬ ಆಶಯದ ಮಾನವ ಕಲ್ಯಾಣ ಹಾರೈಸುವ ಹಿರಿಯ ಹಬ್ಬ ಸಂಕ್ರಾಂತಿ, ದನಕರುಗಳನ್ನು ಬಗೆಬಗೆಯಾಗಿ ವರ್ಣರಂಜಿತವಾಗಿ ಸಿಂಗರಿಸಿ ಕಿಚ್ಚು ಹಾಯಿಸುವುದು ಸಂಕ್ರಾಂತಿಯ ವಿಶೇಷ. ನದಿಗಳ ಸಂಗಮ ಸ್ಥಳಗಳಿಗೆ ಭೇಟಿ ನೀಡಿ ಹರ್ಷೋಲ್ಲಾಸಗಳಿಂದ ಹಬ್ಬ ಆಚರಿಸುವುದು ಸಂಕ್ರಾಂತಿಯ ಮಹತ್ವಗಳಲ್ಲೊಂದಾಗಿದೆ.
ಮಕರ ಸಂಕ್ರಮಣದ ಕಾಲದಿಂದ ದಿನಮಾನ ದೊಡ್ಡದಾಗುವುದರ ಜೊತೆಗೆ ಸೃಷ್ಟಿಯಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಸೃಷ್ಟಿಯಲ್ಲಿ ಸೊಬಗು ಮೈದುಂಬಿಕೊಳ್ಳುತ್ತದೆ. ಭೂಮಿ, ದವಸ-ಧಾನ್ಯಗಳ ಪೂಜೆ, ರಥೋತ್ಸವಗಳ ಸಂಭ್ರಮದ ಆಚರಣೆ, ಎಳ್ಳು ಬೆಲ್ಲಗಳ ವಿನಿಮಯ, ಎಳ್ಳು ಬೆಲ್ಲ ಸ್ವೀಕರಿಸಿ ಒಳ್ಳೆ ಮಾತನಾಡಬೇಕೆಂಬ ಆಶಯದ ಮಾನವ ಕಲ್ಯಾಣ ಹಾರೈಸುವ ಹಿರಿಯ ಹಬ್ಬ ಸಂಕ್ರಾಂತಿ, ದನಕರುಗಳನ್ನು ಬಗೆಬಗೆಯಾಗಿ ವರ್ಣರಂಜಿತವಾಗಿ ಸಿಂಗರಿಸಿ ಕಿಚ್ಚು ಹಾಯಿಸುವುದು ಸಂಕ್ರಾಂತಿಯ ವಿಶೇಷ. ನದಿಗಳ ಸಂಗಮ ಸ್ಥಳಗಳಿಗೆ ಭೇಟಿ ನೀಡಿ ಹರ್ಷೋಲ್ಲಾಸಗಳಿಂದ ಹಬ್ಬ ಆಚರಿಸುವುದು ಸಂಕ್ರಾಂತಿಯ ಮಹತ್ವಗಳಲ್ಲೊಂದಾಗಿದೆ.
-ಮಣಿಕಂಠ ತ್ರಿಶಂಕರ್, ಮೈಸೂರು