ಕಾರವಾರ: ಭಟ್ಕಳ ತಾಲೂಕಿನ ಮುಟ್ಟಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಡೆದಿದೆ.
ಲೋಕೇಶ ನಾಯ್ಕ ಮತ್ತು ಶೇಖರ ನಾಯ್ಕ ಮೃತರು. ಬೈಕ್ ಸವಾರರು ಭಟ್ಕಳದತ್ತ ಆಗಮಿಸುತ್ತಿದ್ದು ಈ ವೇಳೆ ಅತೀ ವೇಗವಾಗಿ ನಿರ್ಲಕ್ಷ್ಯತನದಿಂದ ಮೀನುಲಾರಿ ಚಲಾಯಿಸಿಕೊಂಡು ಬಂದ ಚಾಲಕ ರವಿ ಭೋವಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಲಾರಿ ನಿಯಂತ್ರಿಸಲಾಗದೇ ಮುಂದೆ ತೆರಳಿ ಪಲ್ಟಿಯಾಗಿ, ಲಾರಿ ಜಖಂಗೊಂಡಿದೆ.
ಅಪಘಾತದ ರಭಸಕ್ಕೆ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆಗೆ ದಾಖಲಿಸಲು ಉಡುಪಿಯತ್ತ ತೆರಳುತ್ತಿರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯತನದಿಂದಾಗಿ ಸಾವನ್ನಪ್ಪುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮುಟ್ಟಳ್ಳಿ ಬೈಪಾಸ್ ಬಳಿ ಪದೇ ಪದೇ ಈ ರೀತಿ ಅಪಘಾತಗಳು ಸಂಭವಿಸುತ್ತಿದ್ದು ಐಆರ್ಬಿ ಕಂಪೆನಿಯ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೀನು ಲಾರಿ ಚಾಲಕ ರವಿ ಭೋವಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.