ಕಾರವಾರ: ಅನಧಿಕೃತ ಮರಳನ್ನು ಉಪಯೋಗಿಸಿ ಸರಕಾರಿ ಕಾಮಗಾರಿಗಳು ನಿರಂತರ ನಡೆಯುತ್ತಿವೆ ಎಂದು ಉತ್ತರ ಕನ್ನಡ ಜಿಲ್ಲಾ ಮರಳು ಕಾರ್ಮಿಕರ ಸಂಘ ಆರೋಪಿಸಿದ್ದು ಅಧಿಕೃತ ಮರಳುಗಾರಿಕೆ ಆರಂಭಿಸಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಶನಿವಾರ ಜಿಲ್ಲಾಡಳಿತಕ್ಕೆ ಲಿಖಿತ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಪದಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಯನ್ನು ಹಸಿರು ಪೀಠದ ಆದೇಶದಂತೆ ಮೇ.5ರಿಂದ ಸ್ಥಗಿತಗೊಳಿಸಲಾಗಿದೆ. ಆದರೆ ಕಳೆದ 6 ತಿಂಗಳಿಂದ ಮರಳುಗಾರಿಕೆ ನಿಷೇಧದ ನಡುವೆಯು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ಅನಧಿಕೃತ ಮರಳನ್ನು ಒಳಗೊಂಡು ನಡೆಯುತ್ತಿದೆ.
ಇದು ಹಸಿರು ಪೀಠದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಅತೀ ಅವಶ್ಯಕವಾಗಿದೆ. ಅಲ್ಲದೇ ನದಿಯಲ್ಲಿ ಸಂಗ್ರಹವಾಗುವ ಮರಳನ್ನು ತೆಗೆಯುವುದು ಅವಶ್ಯಕವಾಗಿದ್ದು ಇದರಿಂದ ನೆರೆ, ಪ್ರವಾಹಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸರಕಾರವು ಈ ಕುರಿತು ಶೀಘ್ರವಾಗಿ ಕ್ರಮವಹಿಸಿ ಅಧಿಕೃತ ಮರಳುಗಾರಿಕೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೋವಿಂದ ನಾಯ್ಕ ಹೊನ್ನಾವರ ಸೇರಿದಂತೆ ಹಲವರಿದ್ದರು.