ಕಾರವಾರ: ಶಿರಸಿ ತಾಲೂಕಿನ ಹುಲೇಕಲ್ ಪಂಚಾಯತ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಂ. ವಿ. ಹೆಗಡೆಯವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿಯಿಂದ ಮರಗಿಡ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಕೊಟ್ಯಾಂತರ ರೂ. ಹಾನಿ ಉಂಟಾಗಿದ್ದು, ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಹೊಗೆ ಕಾಣಿಸಿಕೊಂಡ ತಕ್ಷಣ ಕಾರ್ಯ ಪ್ರವೃತ್ತರಾದ ಕುಟುಂಬದ ಸದಸ್ಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಉರಿಯುವ ಬೆಂಕಿಯು ನೋಡ ನೋಡುತ್ತಿದ್ದಂತೆ ಫಸಲು ನೀಡುತ್ತಿದ್ದ ಹಳೆ ತೋಟದಲ್ಲಿ ಹರಡಿ, ತೋಟವನ್ನು ಸುಟ್ಟು ಹಾಕಿದೆ. ಕುಟುಂಬದವರು, ಸ್ಥಳೀಯರು ಅಸಹಾಯಕರಾಗಿ ನಿಲ್ಲುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಈ ಬಗ್ಗೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು, ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.