ಕಾರವಾರ: ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ವಿಧೇಯಕ 2021 ಕರಡನ್ನು ಸಿದ್ದಪಡಿಸಿದೆ. ಈ ಕರಡನ್ನು ಪ್ರಸ್ತುತ ಅಧಿವೇಶನದಲ್ಲಿ ಮಂಡಿಸಿ ಅನುಮೋದಿಸುವಂತೆ ಆಗ್ರಹಿಸಿ ಕಸಾಪ ಘಟಕಗಳು ಎಲ್ಲ ಶಾಸಕರನ್ನು ಭೇಟಿ ಮಾಡಿ ಒತ್ತಾಯಿಸಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಅನುಷ್ಟಾನಕ್ಕಾಗಿ ಅಭಿವೃದ್ದಿ ಪ್ರಾಧಿಕಾರವು ವಿವಿಧ ಕಾನೂನು ಅಧಿಸೂಚನೆ, ಸುತ್ತೋಲೆಗಳನ್ನು ಹೊರಡಿಸಿದ್ದರೂ ಕೂಡ ಪ್ರಾಧಿಕಾರದ ಆಶಯವು ಈಡೇರಿಲ್ಲ ಎಂದರು. ಅಭಿವೃದ್ದಿ ಪ್ರಾಧಿಕಾರವು ನೀಡಿರುವ ಸಲಹೆ ಮತ್ತು ಶಿಫಾರಸ್ಸುಗಳು ಕಡ್ಡಾಯವಾಗಿ ಜಾರಿಗೆ ಬರಲಿಲ್ಲ. ಅಲ್ಲದೆ ಅದೇಶ ಪಾಲಿಸದ ಸಕ್ಷಮ ಪ್ರಾಧಿಕಾರದ ವಿರುದ್ದ ಯಾವುದೇ ರೀತಿಯ ಕ್ರಮವೂ ಕೂಡ ಆಗಿಲ್ಲ. ಹಾಗಾಗಿ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ವಿಧೇಯಕ 2021 ಕರಡನ್ನು ಸಿದ್ದಪಡಿಸಿ ಕಾನೂನು ಆಯೋಗಕ್ಕೂ ಸಲ್ಲಿಸಿ ಅಗತ್ಯ ಸಲಹೆ ನೀಡಲು ಕೋರಿದೆ. ತಮ್ಮ ಕಸಾಪ ಎಲ್ಲ ತಾಲೂಕು ಮತ್ತು ಜಿಲ್ಲಾ ಘಟಕಗಳು ಎಲ್ಲ ಶಾಸಕರನ್ನು ಭೇಟಿ ಮಾಡಿ ಸದನದಲ್ಲಿ ವಿಧೇಯಕ ಮಂಡಣೆಗೆ ಬೆಂಬಲಿಸಿ ಕಾರ್ಯರೂಪಕ್ಕೆ ಬರುವಂತೆ ಒತ್ತಾಯಿಸುತ್ತಿರುವದಾಗಿ ಹೇಳಿದರು.
ಎಲ್ಲ ಸರಕಾರಿ ಕಚೇರಿಗಳಲಿ ಕನ್ನಡ ಭಾಷೆ ಪಾಲನೆ, ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಸರಕಾರದಿಂದ ಅನುದಾನ ಪಡೆಯುವ ಎಲ್ಲ ಖಾಸಗಿ ಸಂಸ್ಥೆ,ಕಂಪನಿಗಳು ಕನ್ನಡಗರಿಗೆ ಉದ್ಯೋಗಾವಕಾಶ ನೀಡಬೇಕು. ಒಂದು ವೇಳೆ ಅವರು ನಿರ್ಲಕ್ಷಿಸಿದಲ್ಲಿ ಅಂತವುಗಳಿಗೆ ಅನುದಾನ ನಿಲ್ಲಿಸಬೇಕು. ಕೆಲವೆಡೆ ಭಾಷಾ ಸಂಘರ್ಷಗಳು ನಡೆಯುತ್ತಿವೆ. ಪ್ರಾಧಿಕಾರ ಸಿದ್ದಪಡಿಸಿದ ವಿಧೇಯಕ ಜಾರಿಗೆ ಬಂದಲ್ಲಿ ಇಂತಹವುಗಳಿಗೆ ಅವಕಾಶ ಇರುವದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಘಟಕದ ಅಧ್ಯಕ್ಷ ರಾಮಾ ನಾಯ್ಕ, ಬಾಬು ಶೇಖ, ಜಾರ್ಜ್ ಫರ್ನಾಂಡೀಸ್, ಇತರರು ಇದ್ದರು.