News Karnataka Kannada
Thursday, May 09 2024
ಉತ್ತರಕನ್ನಡ

ಕಾರವಾರ: ಸುಳ್ಳು ದಾಖಲೆ ನೀಡಿ ಕಟ್ಟಡ ನಿರ್ಮಾಣ- ಕ್ರಮಕ್ಕೆ ಆಗ್ರಹ

Karwar (1)
Photo Credit : By Author

ಕಾರವಾರ: ರಸ್ತೆ ಇದೆ ಎಂದು ಸುಳ್ಳು ದಾಖಲೆ ನೀಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಿರುವುದರ ಕುರಿತು ನಗರಸಭೆಗೆ ದೂರು ನೀಡಿದರೂ ಪ್ರಯೋಜನವಾಗದೇ ನ್ಯಾಯಾಲಯದ ಮೂಲಕ ನ್ಯಾಯ ದೊರಕಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಎದುರಾಗಿರುವುದು ದುರದೃಷ್ಟ ಎಂದು ಕರುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎನ್. ದತ್ತಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಗರದ ಸಾಯಿಕಟ್ಟಾದಲ್ಲಿ ಓರ್ವರು ೩ ಗುಂಟೆ ೯ ಆಣೆ ಜಾಗವನ್ನು ಖರೀದಿಸಿದ್ದು ಅದರಲ್ಲಿ ೯ ಆಣೆ ಜಾಗವನ್ನು ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನಾಗಿ ತೋರಿಸಿ ಎನ್.ಎ. ಮಾಡಿಕೊಂಡಿದ್ದಾರೆ. ಬಳಿಕ ನಗರಸಭೆ, ಕೆ.ಡಿ.ಎ. ಯಿಂದ ಅನುಮತಿ ಪಡೆದು ಬಹುಮಹಡಿ ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ.

ಆದರೆ ಇದಕ್ಕೆ ಸಂಪರ್ಕ ರಸ್ತೆ ಇಲ್ಲದಿದ್ದರೂ ಬಹುಮಹಡಿ ಕಟ್ಟಡ ನಿಮಾಣವಾಗುತ್ತಿರುವುದನ್ನು ಗಮನಿಸಿ ಸ್ಥಳೀಯರು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಾಗ ಸ್ಥಳೀಯರು ಕಾಲುದಾರಿಗೆಂದು ಬಳಸುತ್ತಿದ್ದ ೭ ಅಡಿ ರಸ್ತೆಯನ್ನೇ ೯ ಮೀಟರ್ ರಸ್ತೆ ಇದೆ ಎಂದು ತೋರಿಸಿ ಎನ್.ಎ. ಜಾಗವನ್ನು ಎನ್.ಎ. ಮಾಡಿಕೊಂಡಿರುವುದು ಬಹಿರಂಗಗೊಂಡಿದೆ. ನಿಯಮದ ಪ್ರಕಾರ ೧೪ ಅಡಿ ರಸ್ತೆ ಇರಬೇಕಿದ್ದರೂ ೭ ಅಡಿ ರಸ್ತೆಯನ್ನೇ ೯ ಮೀ. ಇದೆ ಎಂದು ಹೇಳಿದಾಗ ನಗರಸಭೆ, ಕೆಡಿಎ ದವರು ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಆದರೆ ಇದನ್ನು ಮಾಡದೇ ಅನುಮತಿ ನೀಡಿರುವುದರಿಂದ ತಕ್ಷಣ ಸ್ಥಳೀಯರು ಈ ಬಗ್ಗೆ ನಗರಸಭೆಗೆ, ಕೆಡಿಎ, ಜನಪ್ರತಿನಿಧಿಗಳು ಹಾಗೂ ಸಂಬAಧಿಸಿದ ಇಲಾಖೆಗಳಿಗೆ ದೂರು ನೀಡಿದ್ದಾರೆ.

ಆದರೆ ಈ ಬಗ್ಗೆ ಅವರ ಉತ್ತರ ಬರುವ ಮುನ್ನವೇ ಕಟ್ಟಡ ಕಾಮಗಾರಿ ಮುಗಿದಿತ್ತು ಎಂದು ಆರೋಪಿಸಿದರು. ಈ ಬಗ್ಗೆ ನ್ಯಾಯ ದೊರೆಯದ ಕಾರಣ ಸ್ಥಳೀಯರು ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯವು ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿತು. ಆದರೂ ಈ ಬಗ್ಗೆ ಕ್ರಮವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಟ್ಟಡ ಮಾಲೀಕರಿಗೆ ಆ ರಸ್ತೆಯನ್ನು ಬಳಸದಂತೆ ತಡೆಯಾಜ್ಞೆ ನೀಡಿದ್ದು ಅಲ್ಪ ಪ್ರಮಾಣದ ಜಯ ಅವರಿಗೆ ದೊರೆತಿದೆ ಎಂದು ತಿಳಿಸಿದರು.

ತಮ್ಮ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಂಸ್ಥೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಬೇಕಾದ ಸ್ಥಿತಿ ಜನರದ್ದಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನವಹಿಸಬೇಕು. ಈ ಹಿಂದೆ ನಗರದಲ್ಲಿ ೩೧ ಬಹುಮಹಡಿ ಕಟ್ಟಡಗಳು ನಕ್ಷೆಯ ವ್ಯತಿರಿಕ್ತವಾಗಿ ನಿರ್ಮಿಸಲಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಈ ಸಂಖ್ಯೆ ೧೦೦ಕ್ಕೂ ಹೆಚ್ಚು ತಲುಪಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳ ಕೈವಾಡ ಇದೆ ಎಂದು ಆರೋಪಿಸಿದರು.

ಆದೇಶದಂತೆ ೧೬ ಮೀ. ಗಿಂತ ಎತ್ತರ ಕಟ್ಟಡ ನಿರ್ಮಿಸದಂತೆ ತಿಳಿಸಲಾಗಿದ್ದರೂ ೨೦ ಮೀ. ಗಿಂತ ಎತ್ತರದ ಕಟ್ಟಡಗಳ ನಿರ್ಮಾಣವಾಗುತ್ತಿವೆ. ಪಾರ್ಕಿಂಗ್ ಜಾಗವನ್ನು ಮೊದಲು ತೋರಿಸಲಾಗುತ್ತದಾದರೂ ಬಳಿಕ ಆ ಜಾಗದಲ್ಲಿ ಅಂಗಡಿಗಳು, ವಸತಿ ಗೃಹಗಳ ನಿರ್ಮಾಣವಾಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಗರದ ಸಾಯಿಕಟ್ಟಾದ ರಹವಾಸಿಗಳಾದ ದಿನೇಶ ನಾಯ್ಕ, ಮೋಹನ ನಾಯ್ಕ, ಮಹಾದೇವ ನಾಯ್ಕ, ನಾರಾಯಣ ನಾಯ್ಕ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು