ಕಾರವಾರ: ನಗರದ ಬೈತಖೋಲ ಮೀನುಗಾರಿಕಾ ಜಟ್ಟಿಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಬೋಟ್ ಮಾಲೀಕರಿಗೆ ಅಂದಾಜು 50 ಲಕ್ಷ ರೂ. ಹಾನಿ ಆಗಿದೆ. ಬೈತಖೋಲ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ರಂಧ್ರ ಆಗಿದ್ದರಿಂದ ನೀರು ತುಂಬಿದೆ. ಬೋಟ್ನಲ್ಲಿ 30 ಮೀನುಗಾರರಿದ್ದು, ಸಮೀಪದಲ್ಲಿದ್ದ ಮತ್ತೊಂದು ಬೋಟಿನ ಸಹಾಯದಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.
ಆಳ ಸಮುದ್ರದಲ್ಲಿ ಮೀನುಗಳನ್ನು ಶಿಕಾರಿ ಮಾಡಿ ಬರುವಾಗ ಘಟನೆ ಸಂಭವಿಸಿದ್ದು, ಬೋಟು ಭಾರವಾದ ಕಾರಣ ಮೀನುಗಾರರು ಹಿಡಿದ ಮೀನುಗಳನ್ನು ಸಮುದ್ರಕ್ಕೆ ಎಸೆದು ಬಳಿಕ ಬೋಟನ್ನ ಬೈತಖೋಲ ಜಟ್ಟಿಗೆ ಎಳೆದು ತರಲಾಗಿದೆ. ಆದರೆ ಬಂದರಿನಲ್ಲಿ ನಿಲ್ಲಿಸಿಟ್ಟ ಬಳಿಕವೂ ಬೋಟ್ ಮುಳುಗಿದೆ.