ಕಾರವಾರ: ಬಡವರ, ದೀನದಲಿತರ ಪರವಾಗಿರುವ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ, 200 ಯೂನಿಟ್ ಉಚಿತ ವಿದ್ಯುತ್, ಹತ್ತು ಕೆ.ಜಿ. ಅಕ್ಕಿ, ಪದವಿ ಪೂರ್ಣಗೊಳಿಸಿದವರಿಗೆ 2 ವರ್ಷದ ವರೆಗೆ 3000 ರೂಪಾಯಿ ಪ್ರೋತ್ಸಾಹದ ನೀಡುವ ಗ್ಯಾರಂಟಿ ಸ್ಕೀಮ್ ಗಳನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದು, ಇದು ಜನಪರ ಯೋಜನೆಳಗಾಗಿವೆ ಎಂದರು.
ಯುಪಿಎ ಸರ್ಕಾರ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ದರ 450 ರೂ. ಇತ್ತು. ಈಗ 1200 ರೂಪಾಯಿ ಆಗಿದೆ. ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ನಡಿ ಮಹಿಳೆಯರಿಗೆ 2000 ನೀಡುವುದರಿಂದ ಕನಿಷ್ಠ ಗ್ಯಾಸ್ ಸಿಲಿಂಡರ್ ಖರ್ಚು ಸರಿದೂಗಿಸಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣುವಿದ್ಯುತ್ ಸ್ಥಾವರಗಳಿದ್ದರೂ ಯೋಜನೆಗಳಿಂದ ಬಾಧಿತರಾದವರಿಗೆ ಉಚಿತ ವಿದ್ಯುತ್ ದೊರೆಯುತ್ತಿಲ್ಲ. ಎಲ್ಲವನ್ನೂ ನಾವು ಹಣಕೊಟ್ಟೇ ಪಡೆಯಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಎಲ್ಲರಿಗೂ 200 ಯೂನಿಟ್ ಉಚಿತ್ ವಿದ್ಯುತ್ ನೀಡುವ ತೀರ್ಮಾನ ಕೈಗೊಂಡಿದೆ ಎಂದು ಸೈಲ್ ತಿಳಿಸಿದರು.
ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 3000 ರೂಪಾಯಿ ಪ್ರೋತ್ಸಾಹ ಧನ ನೀಡಲು ಸರ್ಕಾರ ನಿರ್ಧರಿಸಿದೆ. ಪದವಿ ಮುಗಿದ ತಕ್ಷಣ ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರಗಳಿಗೆ ಹೋಗುವ ಯುವಕ, ಯುವತಿಯರಿಗೆ ಇದು ನೆರವಾಗಲಿದೆ. ಈ ಹಣ ಪಡೆಯುವ ಮೂಲಕ ಕಂಪ್ಯೂಟರ್ ಸೇರಿದಂತೆ ವೃತ್ತಿ ಆಧಾರಿತ ತರಬೇತಿಗಳಿಗೆ ಫಿ ಪಾವತಿಸಬಹುದಾಗಿದೆ ಎಂದು ಮಾಜಿ ಶಾಸಕರು ನುಡಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ವಿರೋಧ ಪಕ್ಷದವರು ಹ್ಯಾಸ ಮಾಡಿದ್ದರು. ಆದರೆ, ಪಕ್ಷದ ನಾಯಕ ಸುರ್ಜೆವಾಲ ಅವರು ಈ ಗ್ಯಾರಂಟಿ ಕಾರ್ಡ್ಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ವಿರೋಧ ಪಕ್ಷದವರು ಸುಮ್ಮನಾಗಿದ್ದಾರೆ ಎಂದರು. ಮುಡಗೇರಿಯಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾದ ಚೆಕ್ ನೀಡಲಾಗಿದೆ. ಹಾದರೆ, ಹಣ ಇದುವರೆಗೆ ರೈತರ ಖಾತೆ ಜಮೆ ಆಗಿಲ್ಲ. ಕ್ರಿಕೆಟ್ ಪಂದ್ಯಗಳಲ್ಲಿ ವಿಜೇತರಿಗೆ ನೀಡುವ ದೊಡ್ಡದಾಗಿರುವ ಮಾದರಿ ಚೆಕ್ ನೀಡುವ ಮೂಲಕ ಬಿಜೆಪಿ ಸರ್ಕಾರ ಜಮೀನು ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಸೇರ್ಪಡೆಗೊಂಡ ರಾಘು ನಾಯ್ಕ ಮಾತನಾಡಿ, ಸತೀಶ್ ಸೈಲ್ ಅವರು ಅಹಂಕಾರವಿಲ್ಲದ ವ್ಯಕ್ತಿ. ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗುವ ವ್ಯಕ್ತಿ. ಅವರ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷದ ಸೇರ್ಪಡೆಯಾಗಿದ್ದೇವೆ ಎಂದರು.
ಮುಂಬರುವ ಮೇ 5ರೊಳಗೆ ದೊಡ್ಡ ಕಾರ್ಯಕ್ರಮವೊಂದನ್ನು ಮಾಡಿ ಇನ್ನಷ್ಟು ಜನ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ರಮವಿದೆ. ಮುಂಬರುವ ಚುನಾವಣೆಯಲಿ ಅವರು 25ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕ್ಷೇತ್ರದಲ್ಲಿರುವ ಸೀಬಡ್ ನೌಕಾನೆಲೆ ಯೋಜನೆ, ಕೈಗಾ ಯೋಜನಾ ಪ್ರದೇಶಗಳಲ್ಲಿ ಬಿಹಾರ, ಉತ್ತರ ಪ್ರದೇಶದ ಸೇರಿದಂತೆ ಹೊರಗಿನ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಓಡಿಸಿ ಸ್ಥಳೀಯರಿಗೆ ಅಲ್ಲಿ ಅವಕಾಶ ಕಲ್ಪಿಸಲು ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳು ಸೈಲ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಕ್ಷೇತ್ರದ ವೀಕ್ಷಕರಾಗಿ ಬಂದಿರುವ ಛತ್ತಿಸಘಡ ರಾಜ್ಯದ ರಾಯಾಪುರ ಕ್ಷೇತ್ರದ ಶಾಸಕ ವಿಕಾಸ ಉಪಾಧ್ಯಾಯ, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಜೆ.ಡಿ.ನಾಯ್ಕ, ಭಾಸ್ಕರ ಪಟಗಾರ, ಪ್ರಭಾಕರ ಮಾಳ್ಸೆಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯಕ, ಗುರು, ಮಾರುತಿ ನಾಯ್ಕ, ಶ್ಯಾಮ, ದೇವಿದಾಸ, ಜನಾರ್ಧನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.