ಕಾರವಾರ:ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನಗರದಲ್ಲಿ ವಿವಿಧ ಮೀನುಗಾರಿಕಾ ಸಂಘಟನೆಯಿಂದ ಬೃಹತ್ ಮೆರವಣೆಗೆ ನಡೆಯಿತು. ನಗರದ ಕೋಡಿಬೀರ್ ದೇವಸ್ಥಾನದ ಪ್ರದೇಶ ಧ್ವಾರದ ಬಳಿಯಿಂದ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋಗಳ ಕುಣಿತ, ಮೀನುಗಾರರು ದೋಣಿ ನಡೆಸುವ ಮತ್ತು ಬಲೆ ಹಾಕುವ, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ರೂಪಕಗಳು ಎಲ್ಲರ ಗಮನ ಸೆಳೆಯಿತು.
ಮೀನುಗಾರಿಕಾ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಸಾವಿರಾರು ಮೀನುಗಾರರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ, ತಮ್ಮ ಮನವಿಯಲ್ಲಿ ಜಿಲ್ಲಾಡಳಿತ ಮೂಲಕ ಕೇಂದ್ರ,ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು. ಸಲ್ಲಿಸಿದ ಮನವಿಯಲ್ಲಿ ಖಾಸಗಿ ಬಂಡವಾಳ ಶಾಹಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾರಂಪರಿಕ ಮೀನುಗಾರಿಕೆಗೆ ದಕ್ಕೆಯಾಗುವಂತೆ ಹೊನ್ನಾವರ ಕಡಲತೀರಗಳಲ್ಲಿ ಕೈಗೊಂಡಿರುವ ಬಂದರು ಕಾಮಗಾರಿ ಕೈಬಿಡುವುದು, ಮೀನುಗಾರರ ಮೇಲಿನ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಖಾಸಗಿ ಬಂಡವಾಳ ಆಕರ್ಷಿಸುವ ಭರಾಟೆಯಲ್ಲಿ, ಪರಂಪರಾಗತ ಮೀನುಗಾರರ ಹಿತಕ್ಕೆ ಮಾರಕವಾದ ಮತ್ತು ಮೀನುಗಾರಿಕೆ ನೀತಿಗೆ ವಿರುದ್ಧವಾಗಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ ಜಿಲ್ಲೆಯ ಸುಂದರ ಕಡಲತೀರಗಳು, ಜೀವ ವೈವಿಧ್ಯತೆ ನಾಶವಾಗಲಿದೆ. ಇದರಿಂದ ಮುಂದೆ ಮೀನುಗಾರಿಕಾ ಉದ್ಯಮವೇ ಕುಸಿಯುವ ಭೀತಿ ಇದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹೊನ್ನಾವರ- ಕಾಸರಕೋಡಿನ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯಿಂದ ಪರಿಸರದ ಜೊತೆಗೆ ಮೀನುಗಾರರ ಜೀವನೋಪಾಯಕ್ಕೆ ಧಕ್ಕೆಯಾಗಲಿರುವ ಕಾರಣ ಯೋಜನೆ ಕೈಬಿಡಬೇಕು.
ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಈ ವೇಳೆ ಎಂಎಲ್ ಸಿ ಗಣಪತಿ ಉಳ್ವೇಕರ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್, ಜಿಲ್ಲಾಧ್ಯಕ್ಷ ಗಣಪತಿ ಮಾಂಗ್ರೆ, ಜಿಲ್ಲಾ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಮೀನುಗಾರರ ವಿವಿಧ ಸಂಘಟನೆಗಳ ವೇದಿಕೆ ಸಂಚಾಲಕ ವಿಕಾಸ್ ತಾಂಡೇಲ, ಕಡಲ ವಿಜ್ಞಾನಿ ಪ್ರಕಾಶ ಮೇಸ್ತ, ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಾಜು., ಅಂಕೋಲಾದ ರಾಜು ಹರಿಹಂತ್ರ ಸೇರಿದಂತೆ ನೂರಾರು ಜನರು ಇದ್ದರು.