ಕಾರವಾರ: ಹಳಿಯಾಳದಲ್ಲಿ ಮೋಟಾರ್ ಸೈಕಲ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಉತ್ತರಕನ್ನಡ ಪೊಲೀಸರು ಧಾರವಾಡದಲ್ಲಿ ಬಂಧಿಸಿ ಆತನಿಂದ ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಧಾರವಾಡ ಮಾದಿಹಾಳದ ಲಾರಿ ಚಾಲಕನಾಗಿರುವ ಮಹ್ಮದ್ ಇಸಾಕ್ ಅಬ್ದುಲ್ ರೆಹಮಾನ್ ಸೌದಾಗರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಹಳಿಯಾಳ ತಾಲೂಕಿನ ಅಡಿಕೆ ಹುಸೂರಿನ ಮುಬಾರಕ ಘನಿಸಾಬ ತತ್ವಣಗಿ ಎನ್ನುವವರು ಮೇ 25 ರಂದು ಶುಗರ್ ಫ್ಯಾಕ್ಟರಿ ಬಳಿ ನಿಲ್ಲಿಸಿದ್ದ ತನ್ನ ಬೈಕ್ ಯಾರೋ ಕದ್ದೊಯ್ದಿರುವ ಬಗ್ಗೆ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯ ಸುಳಿವಿನ ಖಚಿತ ಮಾಹಿತಿಯ ಮೇರೆಗೆ ಧಾರವಾಡಕ್ಕೆ ತೆರಳಿ ಮಂಗಳವಾರ (ಸೆ.13) ರೈಲು ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಈತನು ಕದ್ದೊಯ್ದ ಬೈಕನ್ನು ವಶಕ್ಕೆ ಪಡೆದು ಕರೆ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಸ್.ಪಿ. ಡಾ. ಸುಮನ ಪೆನ್ನೇಕರ, ಅಡಿಶನಲ್ ಎಸ್.ಪಿ. ಎಸ್. ಬದರಿನಾಥ, ದಾಂಡೇಲಿ ವಿಭಾಗದ ಡಿವೈಎಸ್ಪಿ ಗಣೇಶ ಕೆ. ಎಲ್. ಹಾಗೂ ದಾಂಡೇಲಿ ಸಿ.ಪಿ.ಐ. ರಂಗನಾಥ ನೀಲಮ್ಮನವರ ರವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್.ಐ. ವಿನೋದ ರೆಡ್ಡಿ ಹಾಗೂ ಹಳಿಯಾಳ ಪಿಎಸ್ಐ ಉಮಾ ಬಸರಕೋಡ ಅಚವರ ನೇತ್ರತ್ವದಲ್ಲಿ ಎ.ಎಸ್.ಐ. ಗಳಾದ ಸಂಜು ಬಿ. ಅಣ್ಣಿಕೇರಿ, ಸುರೇಶ ಘಾಟಗೆ, ಸಿಬ್ಬಂದಿಗಳಾದ ಇಸ್ಮಾಯಿಲ್ ಕೋಣನಕೇರಿ, ಎಮ್. ಎಮ್. ಮುಲ್ಲಾ, ಶ್ರೀಶೈಲ ಜಿ. ಎಮ್. ಸೋಹೇಲ್ ನಾಗನೂರ ಹಾಗೂ ಉಮೆಶ ಹನಗಂಡಿ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಸುಮನ್ ಪನ್ನೇಕರ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.