ಕಾರವಾರ: ತಾಲೂಕಿನಲ್ಲಿ ಮರಳು ಸಿಗದೆ ವಿವಿಧ ಅಭಿವೃದ್ಧಿ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟನೆಗಳಿಂದ ಮನವಿ ರವಾನಿಸಲಾಗಿದೆ.
ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘ, ಕಾರವಾರ ಸಿವಿಲ್ ಸಲಹಾ ಅಭಿಯಂತರರ ಸಂಘ, ಹೊನ್ನಾವರ ಲಾರಿ ಟಿಪ್ಪರ್ ಚಾಲಕ ಮತ್ತು ಮಾಲಕರ ಸಂಘ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನೊಡಗೂಡಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ, ಒಂದು ಕಾಲದಲ್ಲಿ ಕಾರವಾರದಿಂದ ಗೋವಾಕ್ಕೆ ನೂರಾರು ಲೋಡ್ ಮರಳು ಸಾಗಾಟವಾಗುತ್ತಿತ್ತು. ಆದರೀಗ ಮರಳುಗಾರಿಕೆಯನ್ನೇ ಸ್ಥಗಿತಗೊಳಿಸಿರುವುದು ಬಹಳಷ್ಟು ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಲು ಕಾರಣವಾಗಿದೆ. ಮರಳಿಗೆ ಪರ್ಯಾಯ ಎನ್ನಲಾಗುತ್ತಿರುವ ಎಂ.ಸ್ಯಾಂಡ್ ನಿರ್ಮಾಣ ಚಟುವಟಿಕೆಗಳಿಗೆ ಯೋಗ್ಯವಲ್ಲ.
ಇನ್ನು ಕನಿಷ್ಠ 10 ಟನ್ ಮರಳಿಗೆ ಪರವಾನಗಿ ನೀಡಲಾಗುತ್ತಿದೆ. ಬಡವರು ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ, ಸಣ್ಣಪುಟ್ಟ ದುರಸ್ತಿ ಕಾರ್ಯವಿರುವವರು ಇಷ್ಟೊಂದು ಮರಳನ್ನು ನಿಯಮದ ಪ್ರಕಾರ ತೆಗದುಕೊಳ್ಳಲೇಬೇಕಾ? ಎಂದು ಪ್ರಶ್ನಿಸಿದರು.
ಹೀಗಾಗಿ ಶೀಘ್ರವೇ ಈ ಬಗ್ಗೆ ಕಾರ್ಯೋನ್ಮುಖರಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದರಲ್ಲೂ ಕಾರವಾರದಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕಿದೆ. ಸರ್ಕಾರದಿಂದ ಹಸಿರು ಪೀಠಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮರಳಿಗೆ ಸಂಬಂಧಿಸಿದಂತೆ ಇರುವ ವ್ಯಾಜ್ಯಗಳನ್ನು ಬಗೆಹರಿಸಲು ಕ್ರಮವಹಿಸಬೇಕಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.