ಸಿದ್ದಾಪುರ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸಿದ್ದಾಪುರ ಸಮೀಪದ ಶ್ರೀರಾಮದೇವ ಭಾನ್ಕುಳಿ ಮಠದ ಶ್ರೀರಾಮದೇವ ಗೋ ಸ್ವರ್ಗದ ಗೋ – ದಿನ ಉತ್ಸವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕೋಗಿಲೆ ಸಿಎಂ ನರಸಿಂಹಮೂರ್ತಿ ಹಾಗೂ ಸಂತ ವಾಣಿ ಸುಧಾಕರ ಅವರು ನಡೆಸಿಕೊಟ್ಟ ಜಾನಪದ ಗೀತೆಗಳ ಜುಗಲ್ಬಂದಿ ಕಾರ್ಯಕ್ರಮ ಮನಸೂರೆಗೊಂಡಿತು.
ವೇದಿಕೆಯ ಇಕ್ಕೆಲೆಗಳಲ್ಲಿ ಗೋವಿಗಾಗಿ ಆಲೆಮನೆ ನಿರ್ಮಿಸಿ ನಿರಂತರ ಕಬ್ಬಿನ ಗಾಣದ ಸದ್ದಿಗೆ ಜಾನಪದ ಗೀತೆಗಳ ಸದ್ದು ಝೇಂಕರಿಸಿತು. ಜಳ್ಳಿ ಜಗ್ಗಿನ ಪಾದಕ್ಕೆ ಶರಣೆಂದು ಮುದ್ದು ಬೆನವನ ಪಾದಕ್ಕೆ, ಗಾಡಿಯ ದಾರಿ ಸಾಗಲಿ, ಬೆಳ್ಳಾನೆ ಎರಡೆತ್ತು ಬೆಳ್ಳಾನೆ ಬಾರೋ ಕೋಲು, ಸಿದ್ದಯ್ಯ ಸ್ವಾಮಿ ಬನ್ನಿ, ತಿಂಗಾಳು ಮುಳುಗಿದವೋ, ಗುರುವೇ ನಿನ್ನಾಟ ಬಲ್ಲವರು ಯಾರ್ಯಾರೋ, ಹಾಲರವಿ ಬಂದು, ಕಕ್ಕೆ ಹೂವಿಗೊಲಿದ ಕವಲು ನಾಮಕ್ಕೊಲಿದ ಸೋಲಿಗರ ಬಾಲೆಗೊಲಿದ ರಂಗಧಾಮ, ಹಾಡಿರಿ ರಾಗಗಳ ನುಡಿಸಿರಿ ತಾಳಗಳ ಚೆಲ್ಲಿದರು ಮಲ್ಲಿಗೆಯ ಹಾಡುಗಳು ಎರಡು ಗಂಟೆಗಳ ಕಾಲ ಭಕ್ತಾಧಿಗಳನ್ನು ಗೋ ಸ್ವರ್ಗದಲ್ಲಿ ತೇಲಾಡಿಸಿದವು.
ಸಹ ಗಾಯನದಲ್ಲಿ ಚಿತ್ತಶ್ರೀ ಹಾಡಿದ ಸಾಗಲಿಲ್ಲ ಹೂವ ಮಾಲೆ, ಬಂಗಾರ ಯಾತಕ್ಕೆ ಮೈಮ್ಯಾಲ ಹಾಡುಗಳು ಜನರಂಜಿಸಿತು. ಕೀಬೋರ್ಡ್ ನಲ್ಲಿ ನವನೀತ್ ಕೃಷ್ಣ ತಬಲಾ ಸಾಥ್ ನಲ್ಲಿ ಶ್ರೀನಿವಾಸ ಕಾಖಂಡಕಿ ಮತ್ತು ಭಟ್ ವಿಶೇಷ ಲಯವಾದ್ಯದಲ್ಲಿ ಮಹೇಶ್ ಭಾಗವಹಿಸಿದ್ದರು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಗಾಯಕರಾದ ನರಹರಿ ದೀಕ್ಷಿತ್, ಹರೀಶ್ ನರಸಿಂಹ , ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಹರಗಿ ಮತ್ತು ಅಪಾರ ಭಕ್ತ ಸಮೂಹ ಭಾಗವಹಿಸಿತ್ತು.