ಕಾರವಾರ: ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಟ್ಯಾಂಕರ್ ಮತ್ತು ಕಾರು ಡಿಕ್ಕಿಯಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅಂಕೋಲಾದಿಂದ ಹೊನ್ನಾವರ ಕಡೆಗೆ ಪ್ರಯಾಣಿಸುತ್ತಿರುವಾಗ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡರ ಕಾರು ಅಪಘಾತಕ್ಕೀಡಾಗಿದೆ. ಅತೀ ವೇಗವಾಗಿ ಬಂದ ಟ್ಯಾಂಕರ್, ಕಾರಿಗೆ ಡಿಕ್ಕಿ ಹೊಡೆಯಿತೆಂದು ಹೇಳಲಾಗಿದೆ. ಗಣಪಯ್ಯ ಗೌಡ, ವಿ ಎಂ ಭಂಡಾರಿ, ಪರಮೇಶ್ವರ ನಾಯ್ಕ ಗಂಭೀರ ಗಾಯಗೊಂಡಿದ್ದಾರೆ.
ಅವರನ್ನು ತಕ್ಷಣ ಸ್ಥಳೀಯರ ಸಹಕಾರದಲ್ಲಿ ಕುಮಟಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಕಂಗೊಂಡಿದೆ. ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಕುಮಟಾ ತಾಲೂಕು ಆಸ್ಪತ್ರೆಗೆ ದೌಡಾಯಿಸಿ, ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಸೂರಜ್ ಸೋನಿ ಅವರು ತಕ್ಷಣ ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿರುವುದಲ್ಲದೆ ಅವರ ಜೊತೆಗೆ ತೆರಳಿ ಕಾಳಜಿ ವಹಿಸಿದ್ದಾರೆ.