ಕಾರವಾರ: ಮಳೆಗಾಲದ ಸಂದರ್ಭದಲ್ಲಿ ರಭಸದ ಮಳೆಗೆ ಕಾಲುವೆಗಳು ಮಣ್ಣು ತುಂಬಿ ನೀರು ಎಲ್ಲೆಂದರಲ್ಲಿ ಹರಿಯುವ ಸಂಭವ ಹೆಚ್ಚಿರುವ ಕಾರಣ ಕಾಲುವೆ ಹೂಳೆತ್ತಬೇಕು ಎಂಬ ಸ್ಥಳೀಯ ಜನರ ಬೇಡಿಕೆಗೆ ಅನುಗುಣವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೂಳು ತುಂಬುವ ಸಮಸ್ಯೆಗೆ ಪರಿಹಾರ ನೀಡಲು ಕೋಡಂಬಿ ಗ್ರಾಮ ಪಂಚಾಯತಿ ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕೋಡಂಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮಾಪುರ ಗ್ರಾಮದ ಬಲದಂಡೆ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ಕಾಮಗಾರಿ ಸ್ಥಳದಲ್ಲಿ “ರೋಜಗಾರ್ ದಿನ” ಆಚರಿಸಲಾಯಿತು.
ಈ ವೇಳೆ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ, ಕೂಲಿಕಾರರಿಗೆ ನೀವು ನಿಮ್ಮ ಸುತ್ತಮುತ್ತಲಿನ ಜನರಿಗೂ ಮಾಹಿತಿ ನೀಡಿ ಉದ್ಯೋಗ ಖಾತರಿ ಕೆಲಸದ ಸದುಪಯೋಗ ಪಡೆಯಬೇಕು. ಖಾತರಿ ಯೋಜನೆಯಡಿ 60 ವರ್ಷ ಮೇಲ್ಪಟ್ಟವರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರಿಗೂ ಶೇ. 50 ರಿಯಾಯಿತಿಯಲ್ಲಿ ಕೆಲಸ ನೀಡಲಾಗುವುದು, ಯಾವುದೇ ಕೂಲಿಕಾರರು ಉದ್ಯೋಗವಿಲ್ಲದೇ ವಲಸೆ ಹೋಗುವುದನ್ನು ತಡೆಯುವುದೇ ನಮ್ಮ ಯೋಜನೆಯ ಮುಖ್ಯ ಉದ್ದೇಶ ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕಾಮಗಾರಿಗಳನ್ನು ನೀಡಲಾಗುತ್ತದೆ. ಹೀಗಾಗಿ ಕೂಲಿಕಾರರು ತಮ್ಮ ಸುತ್ತಮುತ್ತಲಿನಲ್ಲಿ ಸಾರ್ವಜನಿಕವಾಗಿ ಅನುಕೂಲವಾಗುವಂತ ಕಾಮಗಾರಿಗಳ ಮಾಹಿತಿಯನ್ನು ಪಂಚಾಯತ್ ನಲ್ಲಿ ಬೇಡಿಕೆಯಿಟ್ಟರೆ ನಿಮಗೆ ಕೂಲಿಯ ಜೊತೆಗೆ ಗ್ರಾಮದ ಅಭಿವೃದ್ಧಿಯು ಆದಂತಾಗುತ್ತದೆ ಎಂಬುದನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬಿಎಫ್ಟಿ ಗಣಪತಿ ಪವಾರ್, ಗ್ರಾಮ ಕಾಯಕ ಮಿತ್ರ ಸುಧಾ ವಡ್ಡರ್, ಮೇಟ್ ಅಣ್ಣಪ್ಪ, ಕುಮಾರ್ ಹಾಜರಿದ್ದರು.