ಕಾರವಾರ: ಮಹಿಳಾ ಸಶಸ್ತೀಕರಣ, ಪರಿಸರ ಜಾಗೃತಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗೆಗೆ ಜಾಗೃತಿ ಮೂಡಿಸುವ ಸಂಬಂಧ ಸ್ಕೇಟಿಂಗ್ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ರೋಲರ್ ಸ್ಕೇಟಿಂಗ್ ಹೊರಟಿದ್ದು ಗೋವಾ ಮೂಲಕ ಕಾರವಾರ ಪ್ರವೇಶಿಸಿ ಬುಧವಾರ ಮುಂದೆ ಪ್ರಯಾಣ ಬೆಳೆಸಿದೆ.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಆಯೋಜಿಸಿರುವ ಅತುಲ್ಯ ಭಾರತ ರೋಲರ್ ಸ್ಕೇಟಿಂಗ್ ಸಂಕಲ್ಪಿತ ಯಾತ್ರೆಯಲ್ಲಿ 10 ಮಹಿಳೆಯರು ಹಾಗೂ 10 ಪುರುಷರು ಪಾಲ್ಗೊಂಡಿದ್ದಾರೆ. ಕಾಶ್ಮೀರದಿಂದ ರೋಲರ್ ಸ್ಕೇಟಿಂಗ್ ಮೂಲಕವೇ ಪ್ರಯಾಣ ಬೆಳಸಿರುವ ತಂಡ ಈವರೆಗೆ ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಗೋವಾ ಮೂಲಕ ಸುಮಾರು 3700 ಕಿ.ಮೀ. ಕ್ರಮಿಸಿ ರಾಜ್ಯವನ್ನು ಪ್ರವೇಶಿಸಿದೆ. ಗೋವಾ ಕರ್ನಾಟಕ ಗಡಿಭಾಗವಾದ ಮಾಜಾಳಿಯಲ್ಲಿ ಮಂಗಳವಾರ ಸಂಜೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್-ಕರ್ನಾಟಕ ಪ್ರಾಂತ ಸಂಘದಿಂದ ತಂಡವನ್ನು ಬರಮಾಡಿಕೊಳ್ಳಲಾಯಿತು.
ಸಂಜೆ ನಗರದ ಎನ್ಜಿಓ ಹಾಲ್ನಲ್ಲಿ ವಿವಿಧ ಸಂಘಟನೆ ಸದಸ್ಯರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಬುಧವಾರ ಬೆಳಿಗ್ಗೆ ನಗರಸಭೆ ಆವರಣದಿಂದ ಆಯೋಜಿಸಿದ್ದ ಮುಂದಿನ ಪ್ರಯಾಣಕ್ಕೆ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಶುಭ ಹಾರೈಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕಾಶಿ ಪ್ರಾಂತದ ಮಹಿಳಾ ಪ್ರಮುಖ್ ಹಾಗೂ ಸ್ಕೇಟರ್ ಸೋನಿ ಚೌರಾಸಿಯ ಮಾತನಾಡಿ ಎಲ್ಲ ಸ್ಕೇಟರಗಳು ಸೇರಿ ವಿಭಿನ್ನ ಪ್ರಯತ್ನದೊಂದಿಗೆ ಯಾತ್ರೆ ಮಾಡುತ್ತಿದ್ದೇವೆ. ಯಾತ್ರೆಯೂ 30 ರಾಜ್ಯಗಳ, 100 ನಗರಗಳಲ್ಲಿ ಹಾದು ಹೋಗಲಿದೆ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸ್ಕೇಟಿಂಗ್ ಮೂಲಕವೇ ದಾರಿ ಮಧ್ಯೆ ಸಿಗುವ ಧಾರ್ಮಿಕ, ಐತಿಹಾಸಿಕ ಪರಂಪರೆಯ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಲಾಗುತ್ತಿದೆ. ಹಳ್ಳಿಗಳಿಗೆ ತೆರಳಿ ಜನರಲ್ಲಿ ರಕ್ತಹೀನತೆ ಮುಕ್ತ ಭಾರತ, ಅಪೌಷ್ಠಿಕತೆ, ಮಹಿಳಾ ಶಿಕ್ಷಣ ಸೇರದಂತೆ ಇನ್ನಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಇಂತಹ ಪ್ರಮುಖ ಪ್ರದೇಶಗಳಲ್ಲಿ ಪರಿಸರ ಜಾಗೃತಿಗಾಗಿ ಒಂದು ಲಕ್ಷ ಗಿಡಗಳನ್ನು ನೆಡುವ ಉದ್ದೇಶ ಹೊಂದಿದ್ದು ಅದರಂತೆ ನೆಡಲಾಗುತ್ತಿದೆ ಎಂದು ಹೇಳಿದರು. ಎಬಿಜಿಪಿ ಕರ್ನಾಟಕ ಪ್ರಾಂತ ಮಹಿಳಾ ಪ್ರಮುಖ್ ಗಾಯತ್ರಿ ನಾಡಿಗ್ ಮುಂತಾದವರು ಇದ್ದರು.