ಕಾರವಾರ: ತಾಲೂಕಿನ ತೋಡೂರು ಗ್ರಾಮದ ಸರ್ವೆ ನಂಬರ್ 25 ಎ1ಎಯಲ್ಲಿ ಪುರಾತನ ಕಾಲದಿಂದಲೂ ಸ್ಮಶಾನಭೂಮಿ ಇದ್ದು, ಇಲ್ಲಿ ನೌಕಾನೆಲೆಗೆ ಸಂಬಂಧಿಸಿದವರು 10 ಅಡಿ ಹೊಂಡ ತೋಡಿ ರಸ್ತೆ ಕಾಮಗಾರಿ ಮಾಡುತ್ತಿರುವುದರಿಂದ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಈ ಸ್ಮಶಾನ ಭೂಮಿಯಲ್ಲಿ ಹಾಲಕ್ಕಿ ಸಮುದಾಯ, ಗುನಗಿ, ಶೆಟ್ಟಿ ಕೋಮಾರಪಂತ ಮತ್ತು ಸೋನಾರ ಹೀಗೆ ಹಲವು ಜಾತಿ ಸಮುದಾಯದವರು ಅಂತ್ಯಕ್ರಿಯೆಯನ್ನು ಇಲ್ಲಿ ನೆರವೇರಿಸುತ್ತಿದ್ದಾರೆ. ಸಮಸ್ಯೆಯನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 24ರಂದು ತಹಶೀಲ್ದಾರ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು.
ಆದರೆ, ಇದೇ ಸ್ಥಳದಲ್ಲಿ ಕಾಮಗಾರಿಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸ್ಮಶಾನ ಭೂಮಿಯ ಮೇಲ್ಭಾಗದಿಂದ ರಸ್ತೆ ಮಾಡಲು ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲವಾಗಿದ್ದರಿಂದ ಅಂತ್ಯಕ್ರೀಯೆ ಮಾಡಲು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಖುದ್ದಾಗಿ ಸ್ಥಳವನ್ನು ಪರಿಶೀಲಿಸಿ ಸ್ಮಶಾನ ಭೂಮಿಗೆ ಹೋಗಲು ಸರಿಯಾದ ಮಾರ್ಗದ ಕಲ್ಪಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಮತ್ತು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸುರೇಶ್, ಪ್ರವೀಣ ಕುಮಾರ, ನಿತೀನ್ ಕುಮಾರ್, ಕಿರಣ ಗೌಡ, ಗುಲಾಬಿ ಗೌಡ, ರವಿ ಗೌಡ, ತನುಜಾ, ಚಂದ್ರಕಲಾ, ನಾಗರಾಜ ಗೌಡ, ರೇವತಿ ಗೌಡ, ರಜನಿ ಗೌಡ, ಕಿಶೋರಿ ಗೌಡ, ರಾಜು ಗೌಡ, ಜಯಂತಿ ಗೌಡ, ಉಮಕಾಂತ, ಸೂರಜ್, ಗುರುರಾಜ್ ಮತ್ತಿರರು ಇದ್ದರು.