ಕಾರವಾರ: ಸೀಬರ್ಡ್ (Sea bird)ನೌಕಾನೆಲೆ ನಿರಾಶ್ರಿತರ ಭೂಸ್ವಾಧೀನಗೊಂಡ ಜಮೀನಿನ ಪರಿಹಾರದ ಪ್ರಕರಣವನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಆಗ್ರಹಿಸಿ ಕೆಲವು ನಿರಾಶ್ರಿತರು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ರವಾನಿಸಿದರು.
ನೌಕಾನೆಲೆಗಾಗಿ ತಮ್ಮ ಜಮೀನನ್ನು ಬಿಟ್ಟುಕೊಟ್ಟು ಅಮದಳ್ಳಿ, ಮುದಗಾ, ಅವರ್ಸಾ ಸೇರಿದಂತೆ ವಿವಿಧೆಡೆ ನೆಲೆಸಿರುವ ನಿರಾಶ್ರಿತರು ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿರಾಶ್ರಿತರಾದ ಅರವಿಂದ ಗಾಂವಕರ, ಕೃಷ್ಣಾನಂದ ನಾಯ್ಕ, ಸಂತೋಷ ನಾಗೇಕರ ಮುಂತಾದವರು ಮಾತನಾಡಿ ಕಾರವಾರ ಮತ್ತು ಅಂಕೋಲಾ ತಾಲೂಕಿನ ಸುಮಾರು ೧೩ ಹಳ್ಳಿಗಳ ಫಲವತ್ತಾದ ಕೃಷಿ ಜಮೀನನ್ನು ರಾಷ್ಟ್ರೀಯ ನೌಕಾನೆಲೆಗೆ ೧೯೮೬ ರಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ಪ್ರಕಟಣೆ ಹೊರಡಿಸಿ ಜಮೀನಿಗೆ ಕೇವಲ ಪ್ರತಿ ಗುಂಟೆಗೆ ರೂ. ೧೫೦ ವನ್ನು ನಿಗದಿಪಡಿಸಿ ಪರಿಹಾರ ಧನವನ್ನು ವಿತರಿಸಿ ಬಳಿಕ ಬಲವಂತವಾಗಿ ೧೯೯೯ ರಲ್ಲಿ ಆ ಸ್ಥಳದಿಂದ ಹೊರ ಹಾಕಿದ್ದರು. ಈ ವೇಳೆ ಕೆಲವೇ ನೌಕಾನೆಲೆ ನಿರಾಶ್ರಿತರು ಕಾನೂನು ಸಮರದ ಮೂಲಕ ನ್ಯಾಯಾಲಯದಿಂದ ಪ್ರತಿ ಗುಂಟೆಗೆ ರೂ. ೧೧,೫೦೦ ಪಡೆದುಕೊಂಡಿದ್ದರು. ನ್ಯಾಯಾಲಯದ ತೀರ್ಪಿನಂತೆ ನಮಗೆಲ್ಲರಿಗೂ ಪರಿಹಾರ ಧನವನ್ನು ವಿತರಿಸಬೇಕೆಂದು ನಾವೆಲ್ಲರೂ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೇವೆ.
ಕಳೆದ ಎರಡು ವರ್ಷಗಳಿಂದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಕಾರವಾರ ಸಹಾಯಕ ಕಮೀಷನರ್ ಅವರು ನಿರಾಶ್ರಿತರ ಪ್ರಕರಣವನ್ನು ಹೆಚ್ಚಿನ ಕಾಳಜಿ ವಹಿಸಿ ಹೆಚ್ಚಿನ ಪ್ರಕರಣವನ್ನು ಇತ್ಯರ್ಥ ಪಡಿಸಿ ನಿರಾಶ್ರಿತರಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಇತ್ಯರ್ಥ ಹರಿಸಿದ ಪ್ರಕರಣಗಳಿಗೆ ಡಿಫೆನ್ಸ್ ಇಸ್ಟೇಟ್ ಆಫೀಸರ್, ಬೆಂಗಳೂರು, ನೌಕಾನೆಲೆಯವರು ಪರಿಹಾರ ಧನವನ್ನು ವಿತರಿಸದೇ ಕಳೆದ ಹಲವಾರು ವರ್ಷಗಳಿಂದ ತೀರ್ಪಾದ ಪ್ರಕರಣವನ್ನು ಪರಿಹಾರ ಧನ ವಿತರಿಸದೇ, ಡಿಫೆನ್ಸ್ ಕಚೇರಿಯಲ್ಲಿ ಕಡತ ಧೂಳು ತಿನ್ನುತ್ತಿದ್ದು ಇದರಿಂದ ಪರಿಹಾರ ವಿತರಣೆಯಲ್ಲಿ ವರ್ಷಾನುಗಟ್ಟಲೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.