ಉಡುಪಿ: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗೋದಾದ್ರೆ ಖಂಡಿತವಾಗಿ ನಾನು ಅದನ್ನು ಸ್ವಾಗತಿಸುತ್ತೇನೆ. ಜೆಡಿಎಸ್ ಬಿಜೆಪಿಯ ನಡುವೆ ಕೆಲಕಹಿ ಅನುಭವಗಳು ಇದ್ದೇ ಇದೆ. ಆದ್ರೆ. ಮುಂದಿನ 2024ರ ಗುರಿ ದೊಡ್ಡದು ಇರೋದ್ರಿಂದ ಹಳೆಯ ಕಹಿಯನ್ನು ಮರೆತು 24ರ ಗುರಿಯನ್ನು ಕಂಡುಕೊಳ್ಳುತ್ತೇವೆ. 2024ಕ್ಕೆ ಮೋದಿಯನ್ನು ದೇಶದ ಪ್ರಧಾನಿ ಮಾಡುವುದು ನಮ್ಮ ಗುರಿ ಎಂದು ಮಾಜಿ ಸಚಿವ ಶಾಸಕ ಸುನೀಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗೋದನ್ನು ನಾನು ನೋಡಿದ್ದೇನೆ. ಲೋಕಸಭಾ ಚುನಾವಣೆಗೆ ಮೈತ್ರಿ ಮಾಡುವುದಾದರೆ ನಾನು ಸ್ವಾಗತಿಸುತ್ತೇನೆ. ಹಳೆಯ ಹತ್ತಾರು ಸಂಗತಿಗಳು ನಮ್ಮ ಎರಡು ಪಕ್ಷಗಳ ನಡುವೆ ಇರಬಹುದು. ಆದರೆ, ಪೂರ್ಣಬಹುಮತದ ಬಿಜೆಪಿ ಸರ್ಕಾರ ಏನ್ ಡಿಎ ಮೈತ್ರಿಕೂಟವನ್ನು ಬಲಪಡಿಸುವುದೇ ನಮ್ಮ ಗುರಿ. ಮೋದಿ ಪ್ರಧಾನಿ ಆದರೆ ಮಾತ್ರ ದೇಶವನ್ನು ಮುನ್ನಡೆಸಲು ಸಾಧ್ಯ ಎಂಬ ಭಾವನೆ ಇದೆ. ಕೇಂದ್ರ ನಾಯಕತ್ವ ಕರ್ನಾಟಕದ ವಿಚಾರದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಬಿಜೆಪಿ 66 ಶಾಸಕರು ಇರುವಾಗ ಬಿಜೆಪಿ ಶಾಸಕರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಿ ಎಂದು ನಾನು ಹೇಳಿದ್ದೆ. ಆ ನಿಲುವಿಗೆ ನಾನು ಇಂದಿಗೂ ಬದ್ಧವಾಗಿದ್ದೇನೆ. ನಮ್ಮ 66 ಬಿಟ್ಟು ಬೇರೆಯವರನ್ನ ವಿಪಕ್ಷ ನಾಯಕ ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದೆ. ಇದರ ಸಾಧಕ ಬಾಧಕಗಳನ್ನು ನಮ್ಮ ನಾಯಕರು ಮನವರಿಕೆ ಮಾಡಿದರೆ ಒಪ್ಪಿಕೊಳ್ಳುತ್ತೇವೆ.
ದೇಶದ ಎಲ್ಲ ಜನ ಪ್ರಧಾನಿ ನರೇಂದ್ರ ಮೋದಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ದೇಶದ 150 ಕೋಟಿ ಜನಕ್ಕೆ ಮೋದಿ ಬೇಕು. ದೇಶದ ರಕ್ಷಣೆ ಆರ್ಥಿಕತೆ ಜನಸಾಮಾನ್ಯರ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಬೇಕು ಎಂಬ ಅಭಿಪ್ರಾಯ ಇದೆ. ಜನರಿಗೆ ಮೋದಿ ಬೇಕು ಎಂಬ ಭಾವನೆ ಇದೆ. ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ಮೋದಿಗೆ ಇದೆ ಎಂದು ಜನ ನಿರ್ಧರಿಸಿದ್ದಾರೆ. ಬೆರಳೆಣಿಕೆಯ ವಿರೋಧಿ ಒಕ್ಕೂಟಕ್ಕೆ ಮೋದಿ ಪ್ರಧಾನಿಯಾಗೋದು ಬೇಡವಾಗಿದೆ ಅಷ್ಟೇ ಎಂದು ಟೀಕಿಸಿದರು.