ಉಡುಪಿ: ತಿರುಕನೋರ್ವ ಊರಮುಂದೆ ಕನಸು ಕಾಣುತ್ತಿದ್ದನು ಎಂಬ ಪದ್ಯವನ್ನು ನಾವು ಶಾಲೆಗೆ ಹೋಗುವಾಗ ಕೇಳಿದ್ದೇವೆ. ಆ ರೀತಿ ಕಾಂಗ್ರೆಸ್ ನ ಪರಿಸ್ಥಿತಿ ಆಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದ್ರೆ ಅವರು ಅಪ್ಪನಾಣೆಗೂ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ರೀತಿಯ ನಷ್ಟವಿಲ್ಲ. ಇಂತಹ ಹಲವಾರು ಪಕ್ಷಗಳು ಬಂದು ಹೋಗಿವೆ. ಬಿಜೆಪಿ ದೇಶದ ನಂಬರ್ 1 ಪಾರ್ಟಿ. ನಾವು ಕಾಂಗ್ರೆಸ್ ನಂತಹ ಪಾರ್ಟಿಯನ್ನೇ ಎದುರಿಸಿ ಬಂದವರು ಎಂದರು.
ಮಂಗಳೂರು ಜಲೀಲ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಇಂತಹ ಕೃತ್ಯದಿಂದ ರಾಜಕೀಯ ಲಾಭ ಪಡೆಯುತ್ತದೆ. ಆದರೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.