ಮಂಗಳೂರು, ಡಿ.16: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಪ್ರಾರಂಭವಾದವು. ಭಯೋತ್ಪಾದನೆಗೆ ಮೂಲ ಪ್ರೇರಣೆಯೇ ಕಾಂಗ್ರೆಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಮಾತನಾಡಿ, ಬಿಂದ್ರನ್ ವಾಲೆ ಸೃಷ್ಟಿ ಇಂದಿರಾ ಗಾಂಧಿಯಿಂದಲೇ ಆಗಿದೆ. ಕಾಶ್ಮೀರದಲ್ಲಿ ಪ್ರಾರಂಭವಾದ ಭಯೋತ್ಪಾದನೆ ಪ್ರತಿಯೊಂದು ರಾಜ್ಯ, ಊರುಗಳಲ್ಲಿ ಹೆಚ್ಚಾಯಿತು. ಇದೇ ಮಾನಸಿಕತೆಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಂದಿದ್ದಾರೆ. ಆದ್ದರಿಂದಲೇ ಅವರು ಮಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ಭಯೋತ್ಪಾದನಾ ಕೃತ್ಯವಲ್ಲ ಎಂದು ಬಿಂಬಿಸುತ್ತಿದ್ದಾರೆ ಎಂದರು.
ಶಾರೀಕ್ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದರು. ಪೊಲೀಸರ ತನಿಖೆಯ ಆಧಾರದಲ್ಲಿ ಶಾರೀಕ್ನದ್ದು ಭಯೋತ್ಪಾದನಾ ಕೃತ್ಯವೆಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಭಯೋತ್ಪಾದಕತೆಯ ಪರವಾಗಿದೆ. ಸ್ವಾತಂತ್ರಕ್ಕಾಗಿ ಕೆಲಸ ಮಾಡಿದ ಕಾಂಗ್ರೆಸ್ ಇದೀಗ ದೇಶ ವಿರೋಧಿ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಹೇಳಿಕೆ ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ ಎಂದು ಹೇಳಿದರು.