ಉಡುಪಿ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಯುವಕನೋರ್ವ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಸಾರ್ವಜನಿಕರು ಹತ್ತಿರಕ್ಕೂ ಬಾರದೆ ಮಾನವೀಯತೆ ಮರೆತ ಘಟನೆ ಕಟಪಾಡಿಯಲ್ಲಿ ನಡೆದಿದೆ.
ನಿನ್ನೆ ಉಡುಪಿಯ ಕಟಪಾಡಿಯಲ್ಲಿ ಸ್ಕೂಟರ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ನಡೆದಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದನು. ಗಾಯಾಳನ್ನು ಕೊಂಡೊಯ್ಯವಂತೆ ಇಬ್ಬರು ಗೆಳೆಯರು ಗೋಗರೆದರೂ, ಜನರು ಮಾತ್ರ ದೂರವೇ ನಿಂತು ಎಲ್ಲವನ್ನು ಮೌನವಾಗಿ ನೋಡುತ್ತಿದ್ದರು. ರಿಕ್ಷಾ ಆದ್ರೂ ಕರೆ ತನ್ನಿ ಅಂದ್ರೂ ಸ್ಪಂದಿಸಲಿಲ್ಲ.
ಪೊಲೀಸರು ಸ್ಥಳದಲ್ಲೇ ಇದ್ರೂ ಹತ್ತಿರಕ್ಕೂ ಬಾರಲಿಲ್ಲ. ಕೊನೆಗೆ ಗೆಳೆಯರು ಕಾಡಿ ಬೇಡಿ ಆಟೋದಲ್ಲಿ ಗಾಯಾಳು ಗೆಳೆಯನನ್ನು ಆಸ್ಪತ್ರೆಗೆ ಕೊಂಡೊಯ್ಯಿದ್ದರು. ಆದ್ರೆ ಗೆಳೆಯ ಮಾತ್ರ ಬದುಕಿ ಬರಲಿಲ್ಲ. ಗಾಯಾಳು ಗೆಳೆಯನನ್ನು ಹಿಡಿದು ಆಕ್ರಂದಿಸುವ ಗೆಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.