ಉಡುಪಿ: ಮಾನಸಿಕ ಅಸ್ವಸ್ಥತೆಯಿಂದ ಬೆತ್ತಲೆಯಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ವ್ಯಕ್ತಿಯನ್ನು 55ವರ್ಷದ ಶ್ರೀಧರ್ ಎಂದು ಗುರುತಿಸಲಾಗಿದೆ. ಇವರು ಮಾನಸಿಕ ಅಸ್ವಸ್ಥರಾಗಿ ರಾಷ್ಟ್ರೀಯ ಹೆದ್ದಾರಿ 66ರ ಹನುಮಂತ ನಗರದ ಬಳಿ ಬೆತ್ತಲೆಯಾಗಿ ತಿರುಗಾಡುತ್ತಿದ್ದು, ಸಾರ್ವಜನಿಕರ ಮನೆಗಳಿಗೂ ಪ್ರವೇಶಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಭಯಭೀತರಾದ ಸಾರ್ವಜನಿಕರು ಹಾಗೂ ಮಹಿಳೆಯರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ವಿಶು ಶೆಟ್ಟಿಯವರು, ವ್ಯಕ್ತಿಯನ್ನು ರಕ್ಷಿಸಿ ತನ್ನ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಗೆ ಕಾರ್ಕಳ ಮತ್ತು ಉಡುಪಿಯಲ್ಲಿ ಸಂಬಂಧಿಕರಿದ್ದಾರೆಂದು ತಿಳಿಸಿದ್ದಾರೆ. ಸಂಬಂಧಿಕರು ಮತ್ತು ಸಂಬಂಧ ಪಟ್ಟವರು ಬಾಳಿಗ ಆಸ್ಪತ್ರೆಯನ್ನು ಸಂಪರ್ಕಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ನಗರ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ. ರಕ್ಷಣಾ ಕಾರ್ಯದಲ್ಲಿ ಸಹೋದರ ಯುವಕ ಮಂಡಲದ ನವೀನ್ ಅಂಚಾನ್ ಹಾಗೂ ಹನುಮಂತ ನಗರದ 9ನೇ ತರಗತಿಯ ವಿದ್ಯಾರ್ಥಿ ಶಬರೀಶ್ ಸಹಕರಿಸಿದ್ದಾರೆ..