ಉಡುಪಿ : ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಷನ್ ವತಿಯಿಂದ ಮೂರನೇ ರಾಜ್ಯ ಸಬ್ ಜ್ಯೂನಿಯರ್ ಚಾಂಪಿಯನ್ಶಿಪ್ ಕಬಡ್ಡಿ ಪಂದ್ಯಾಟವು ಇದೇ ಬರುವ ಡಿ.9ರಿಂದ 11ರವರೆಗೆ ಹೆಬ್ರಿ ಶಿವಪುರದಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಿಂದ 16 ವರ್ಷದೊಳಗಿನ 55 ಕೆಜಿ ವಿಭಾಗದಲ್ಲಿ 27 ಬಾಲಕರ ಮತ್ತು 27 ಬಾಲಕಿಯರ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಡಿ.9ರಂದು ವಿವಿಧ ಜಿಲ್ಲೆಗಳಿಂದ ಆಗಮಿಸುವ 750 ಕ್ರೀಡಾಪಟುಗಳನ್ನು ಶಿವಪುರ ಪಂಚಾಯಿತಿಯಿಂದ-ಕ್ರೀಡಾಂಗಣದವರೆಗೆ ಮೆರವಣಿಯಲ್ಲಿ ಕರೆದುಕೊಂಡು ಹೋಗಲಾಗುವುದು ಎಂದರು.
ಅಸೋಶಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಮಾತನಾಡಿ, ಶಿವಪುರದ ಹೈಸ್ಕೂಲಿನ ಕ್ರೀಡಾಂಗಣದಲ್ಲಿ 3 ಮ್ಯಾಟ್ ಕಬಡ್ಡಿ ಕ್ರೀಡಾಂಗಣವನ್ನು ಸಿದ್ಧಗೊಳಿಸಿದ್ದು, 4 ಸಾವಿರ ಜನ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ತಂಡ ಸೇರಿದಂತೆ ರಾಜ್ಯದ 54 ಕಬಡ್ಡಿ ತಂಡಗಳು ಭಾಗವಹಿಸುತ್ತಿವೆ. ಈ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಕರ್ನಾಟಕ ರಾಜ್ಯ ತಂಡ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿ ಆರೂರು, ಪಂದ್ಯಾಟದ ಸಂಘಟನಾ ಸಮಿತಿ ಸಂಚಾಲಕ ಸುರೇಶ್ ಶೆಟ್ಟಿ ಹುಣಸೇಅಡಿ, ಕಾರ್ಯದರ್ಶಿ ವಿನಯ್ಕುಮಾರ್, ಕೋಶಾಧಿಕಾರಿ ಗಣೇಶ್ ಕುಲಾಲ್, ಜತೆ ಕಾರ್ಯದರ್ಶಿ ಹರೀಶ್ ಪೂಜಾರಿ, ಗೌರವ ಸಲಹೆಗಾರ ರಮಾನಂದ ಶೆಟ್ಟಿ ಇದ್ದರು.