ಬೆಂಗಳೂರು: ಸಂಧ್ಯಾ ಅವರ ಬರವಣಿಗೆ ಕಾವ್ಯಾತ್ಮಕವಾಗಿದ್ದು, ಕಾವ್ಯದ ಸ್ಪರ್ಶವನ್ನು ಪಡೆದುಕೊಂಡಿದೆ. ಇದೊಂದು ಸುಂದರ ಪ್ರಬಂಧ ಪರ್ಯಟನಾ ಕೃತಿ ಎಂದು ಕರೆಯಲು ಇಷ್ಟಪಡುತ್ತೇನೆ” ಎಂದು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಅವರ ಜಂಟಿ ಆಶ್ರಯದಲ್ಲಿ ಡಾ. ಸಂಧ್ಯಾ ಎಸ್. ಪೈ ಅವರ ‘ಸ್ಮೃತಿ ಗಂಧವತೀ ನೆನಪುಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಇಡೀ ಪುಸ್ತಕಕ್ಕೆ ನೆನಪುಗಳೇ ಆಧಾರ. ಸಂಧ್ಯಾ ಅವರ ದೃಷ್ಟಿಯಲ್ಲಿ ʻಸ್ಮೃತಿʼ ಅನ್ನುವ ಮಾತಿಗೆ ಕೇವಲ ನೆನಪು ಅನ್ನುವ ಅರ್ಥವಿಲ್ಲ, ಇನ್ನೂ ಗಂಭೀರವಾದ ಅರ್ಥವನ್ನು ಪಡೆದುಕೊಂಡಿದೆ. ಪುನರ್ಜನ್ಮಗಳು ಕೂಡಾ ಸ್ಮೃತಿಯ ನಿರಂತರತೆಯ ಫಲ ಎಂದು ಕೃತಿಯಲ್ಲಿ ಹೇಳುತ್ತಾರೆ. ಸುಮಾರು ಐವತ್ತು ವರ್ಷಗಳ ತಮ್ಮ ಸ್ಮೃತಿ ಪಥವನ್ನು ‘ಸ್ಮೃತಿ ಗಂಧವತೀ ನೆನಪುಗಳು’ ಪುಸ್ತಕದಲ್ಲಿ ಸರಾಗವಾಗಿ ಸಂಧ್ಯಾ ಅವರು ತೆರೆದಿಟ್ಟಿದ್ದಾರೆ. ಅವರ ಬರವಣಿಗೆ ಕೇವಲ ನಿರೂಪಣೆ ಅಲ್ಲ, ಬದಲಾಗಿ ಭಾಷೆಯ ಸೂಕ್ಷ್ಮತೆ, ಅದನ್ನು ತಮ್ಮ ಬರವಣಿಗೆಯಲ್ಲಿ ದಾಖಲಿಸುತ್ತಾರೆ. ಹಾಗಾಗಿ ಬರವಣಿಗೆಯಲ್ಲಿ ಒಂದು ಅಧಿಕೃತತೆ ಬರುತ್ತದೆ. ಇಲ್ಲಿ ಹೇಳಿರುವ ವಿಚಾರಗಳು ಕೇವಲ ವಸ್ತು ಮಾತ್ರವಲ್ಲ, ಆ ವಸ್ತುವಿನ ಅಂತರಂಗ ಕೂಡಾ ಭಾಷಾ ದ್ರವ್ಯವನ್ನು ಕಟ್ಟಿಕೊಂಡು ನಮ್ಮ ಕಣ್ಣಮುಂದೆ ಪ್ರತ್ಯಕ್ಷವಾಗುತ್ತದೆ. ತಮ್ಮ ಪ್ರಾಂತ್ಯದಲ್ಲಿ ಬಳಕೆಯಾಗುವ ಪದಗಳ ವಿಶಿಷ್ಟವಾದ ರೂಪುವನ್ನು ಪ್ರಬಂಧದಲ್ಲಿ ಲೀಲಾಜಾಲವಾಗಿ ಬಳಸುವುದರಿಂದ ಹೊಸ ಪ್ರಪಂಚವನ್ನು ತೆರೆದಂತೆ ಭಾಸುವಾಗುತ್ತದೆ. ಹೀಗೆ ತಮ್ಮ ಬಾಲ್ಯಕಾಲದ ಜಗತ್ತು, ಅದರಿಂದ ಪಟ್ಟ ನೋವುಗಳು ಎಲ್ಲವನ್ನೂ ಕೂಲಂಕುಶವಾಗಿ ವರ್ಣಿಸಿದ್ದಾರೆ ಎಂದು
ಓದುಗರನ್ನು ಚಿಂತನೆಗೆ ಹಚ್ಚುವ ಕೃತಿ:
ಸಂಧ್ಯಾ ಅವರು ತಮ್ಮ ವೈವಿಧ್ಯಮಯವಾದ ನೆನಪಿನ ಭಂಡಾರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕೃತಿಯಲ್ಲಿ ಅವರ ಅಧ್ಯಯನ ವ್ಯಾಪ್ತಿ ಮತ್ತು ಅನ್ವೇಷಣಾ ಪ್ರವೃತ್ತಿ ಅದ್ಭುತವಾಗಿದೆ. ಇಲ್ಲಿ ಅನುಭವದ ನೆನಪು ಮಾತ್ರ ಇಲ್ಲ, ಪ್ರಸ್ತುತದ ಅವರ ಮಾಗಿದ, ಪ್ರಬುದ್ದ, ಪಕ್ವಗೊಂಡ ವಯೋಮಾನದಲ್ಲಿ ಅಂದಿನ ಸಂಗತಿಗಳನ್ನು ವಿಶ್ಲೇಷಣೆ ಮಾಡಿದ್ದು ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ. ಈ ಬರಹದಲ್ಲಿ ಯಾವುದೇ ಏಕತಾನತೆ ಇಲ್ಲ. ಇಲ್ಲಿ ಹೇಳಿರುವ ಕೆಲವು ಘಟನಗಳು ನಮ್ಮದೂ ಎನಿಸುವುದರಿಂದ ಪುಸ್ತಕ ಓದುತ್ತಾ ಹೋದಂತೆ ಅದರಲ್ಲಿ ನಾವೂ ಒಂದು ಪಾತ್ರವಾಗಿಬಿಡುತ್ತೇವೆ ಎಂದು ಕೃತಿಯ ಬಗ್ಗೆ ಲೇಖಕಿ ನಂ. ನಾಗಲಕ್ಷ್ಮಿ ಅಭಿಪ್ರಾಯಪಟ್ಟರು.
ಬದುಕನ್ನು ಕತೆಯಾಗಿ ತೆಗೆಯಬೇಕು:
ಇಲ್ಲಿ ಹೇಳಿರುವ ಎಲ್ಲಾ ಕಥೆಗಳು ನೈಜ ಕತೆಗಳಾಗಿವೆ. ಈವರೆಗೆ ಕೇಳಿದ, ನೋಡಿದ ಎಲ್ಲರ ಬದುಕಿನಲ್ಲೂ ನಡೆಯಬಹುದಾದ ಘಟನೆಗಳನ್ನು ಕತೆಯ ರೂಪದಲ್ಲಿ ತಂದಿದ್ದೇನೆ. ಈ ಕತೆಗಳನ್ನು ಬರೆಯುತ್ತಾ ಹಲವಾರು ವಿಚಾರಗಳನ್ನು ಕಲಿತುಕೊಂಡೆ. ಜೀವನವನ್ನು ಕತೆಯಾಗಿ ತೆಗೆಯಬೇಕೇ ಹೊರತು ಗಂಭೀರವಾಗಿ ನೋಡಬಾರದು ಎಂದೆನಿಸಿತು ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ತಮ್ಮ ಅನುಭವಗಳನ್ನು ಹಂಚಿಕೊಂಡರು.