ಉಡುಪಿ: ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಗೆ ಕರ್ನಾಟಕ ಬಜೆಟ್ ನ ಶೇ. 10 ಬಳಸುವ ಯೋಚನೆ ಮಾಡಿದೆ ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಆರೋಪಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಜಿಲ್ಲಾ ಬಿಜೆಪಿಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಕ್ಷಿಣ ಭಾರತದಲ್ಲೇ ಕರ್ನಾಟಕ ಅಭಿವೃದ್ಧಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕದಿಂದ ಹೊರಗೆ ನಿಂತು ನೋಡಿದಾಗ ಅಭಿವೃದ್ಧಿ ತಿಳಿಯುತ್ತದೆ. ಆದರೆ, ಈಗ ನಿದ್ದೆಯಿಂದ ಎದ್ದು ಈಗ ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಿದ್ದೆ ಮಾಡಿ ಹಲ್ಲುಜ್ಜಲು ಹೋಗುವ ಗ್ಯಾಪಲ್ಲಿ ಕಾಂಗ್ರೆಸ್ ಸದಾ ಆರೋಪ ಮಾಡುತ್ತದೆ ಎಂದು ಟೀಕಿಸಿದರು.
ನಮ್ಮ ಬಳಿ ಅಭಿವೃದ್ಧಿ ಇದೆ- ಡಬಲ್ ಎಂಜಿನ್ ಸರ್ಕಾರ ಇದೆ. ಭಾರತದ ಅಭಿವೃದ್ಧಿ ಜೊತೆ ಕರ್ನಾಟಕ ಜನ ನಿಲ್ಲುತ್ತಾರೆ. ಉಡುಪಿಯಲ್ಲಿ ಐದಕ್ಕೈದು, ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನದಲ್ಲಿ ಗೆದ್ದು, ಕರ್ನಾಟಕದಲ್ಲಿ ಮೊದಲ ಬಾರಿ ಪೂರ್ಣ ಬಹುಮತದ ಸರಕಾರ ರಚಿಸಲಿದೆ ಎಂದು ಭವಿಷ್ಯ ನುಡಿದರು.