ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ರಸ್ತೆ ಫಲಾನುಭವಿಗಳು, ರಸ್ತೆ ಸಮಗ್ರ ಅಭಿವೃದ್ಧಿ ಆಗುವವರೆಗೆ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದಾರೆ.
ಕಮಿಲಡ್ಕದಲ್ಲಿ ಭಾನುವಾರ ನಾಗರಿಕರ ಸಭೆ ನಡೆದು ಮತದಾನ ಬಹಿಷ್ಕಾರ ಮತ್ತು ರಸ್ತೆ ದುರಸ್ತಿಗೆ ಆಗ್ರಹಿಸಿ ನಗರ ಪಂಚಾಯತ್ ಎದುರು ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸುವ ಬಗ್ಗೆ ಮಾತುಕತೆ ನಡಯಿತು. ಉದ್ಯಮಿ ಸುರೇಶ್ಚಂದ್ರ ಕಮಿಲ ನಮ್ಮ ಹಲವು ವರುಷಗಳ ಬೇಡಿಕೆಗೆ ಈಡೇರಿಲ್ಲ. ನಮಗೆ ಯಾರ ಭರವಸೆಯೂ ಬೇಡ ರಸ್ತೆ ಮಾಡಿಯೇ ತೋರಿಸಬೇಕು ಎಂದು ಹೇಳಿದರು.
ಬಾಲಕೃಷ್ಣ ನಾಯರ್ ನೀರಬಿದಿರೆ, ದೀಕ್ಷಿತ್ ಪಾನತ್ತಿಲ ಮನೋಜ್ ಪಾನತ್ತಿಲ, ನ.ಪಂ.ಮಾಜಿ ಸದಸ್ಯ ಇಬ್ರಾಹಿಂ ನೀರಬಿದಿರೆ, ಶಿವಾನಂದ ಕಮಿಲಡ್ಕ, ಲ್ಯಾಂಪ್ಸ್ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ನ್ಯಾಯವಾದಿ ಶ್ಯಾಂ ಪಾನತ್ತಿಲ, ಮಾಜಿ ಗ್ರಾ.ಪಂ.ಸದಸ್ಯ ಮೋಹನ ಬೇರ್ಪಡ್ಕ, ಡಾ. ಗಣೇಶ ಶರ್ಮಾ, ಕುಶ ನೀರಬಿದಿರೆ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಪ್ರಮುಖರಾದ ಗಿರೀಶ್ ಪಾಲಡ್ಕ, ಶಂಬಯ್ಯ ಪಾರೆ, ಆನಂದ ಗೌಡ ನೀರಬಿದಿರೆ, ಶಿವರಾಮ ಗೌಡ ಮಡಪ್ಪಾಡಿ, ಚಂದ್ರಶೇಖರ ಗೌಡ ಮದಕ,ಜಯರಾಮ ಪಾನತ್ತಿಲ, ಹರಿಪ್ರಸಾದ್ ಪಾನತ್ತಿಲ, ಗುರು ಪ್ರಸಾದ್ ಅಮೈ, ಲೋಹಿತ್ ಮಾಣಿಬೆಟ್ಟು, ರವಿಚಂದ್ರ ಈಶ್ವರಡ್ಕ,ವಾಸುದೇವ ಮದಕ,ಬೋಜಪ್ಪ ಮಾಣಿಬೆಟ್ಟು,ವಿಷ್ಣು ಭಟ್, ವಸಂತ ಕಾರ್ಗಿಲ್,ದಿನೇಶ್ ಕೊಯಿಕುಳಿ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತಿಮವಾಗಿ ಮತದಾನ ಬಹಿಷ್ಕಾರ, ನಗರ ಪಂಚಾಯತ್ ಎದುರು ಭಿಕ್ಷಾಟನೆ, ರಸ್ತೆ ತಡೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ರೂ. 40 ಲಕ್ಷ ಅನುದಾನ ಇರಿಸಲಾಗಿದೆ : ವಿನಯ್ ಕಂದಡ್ಕ
ಕೊಡಿಯಾಲಬೈಲು- ದುಗಲಡ್ಕ ರಸ್ತೆ ಅಭಿವೃದ್ದಿಗೆ ಮಳೆಹಾನಿ ಕಾಮಗಾರಿ ಅಡಿಯಲ್ಲಿ ರೂ. 25 ಲಕ್ಷ ಮಂಜೂರಾಗಿದ್ದು, ಸುಮಾರು 310 ಮೀಟರ್ ಗಳಷ್ಟು ಕಾಂಕ್ರೀಟೀಕರಣ ಕಾಮಗಾರಿಯು ಇನ್ನು ಎರಡು ಮೂರು ದಿನಗಳಲ್ಲಿ ಆರಂಭವಾಗಿವಾಗಲಿದೆ. ಅಲ್ಲದೆ ಜಟ್ಟಿಪಳ್ಳದಿಂದ ಕೊಡಿಯಾಲ ಬೈಲುವರೆಗೆ ರಸ್ತೆ ದುರಸ್ತಿ ಹಾಗೂ ಮರುಡಾಮರೀಕರಣಕ್ಕೆ ನಗರ ಪಂಚಾಯತ್ ವತಿಯಿಂದ ಈಗಾಗಲೇ ರೂ.15 ಲಕ್ಷ ಇರಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ.
ಈ ಕಾಮಗಾರಿ ಕೂಡ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಈ ರಸ್ತೆಯನ್ನು ಹಂತ ಹಂತವಾಗಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ನಾವು ಬದ್ಧರಿದ್ದು ಸೂಕ್ತ ಅನುದಾನದ ಪ್ರಸ್ತಾವನೆಗಳು ವಿವಿಧ ಹಂತದಲ್ಲಿ ಇವೆ. ಸುಮಾರು ಎಂಟು ಕಿಲೋಮೀಟರ್ ಉದ್ದದ ಈ ರಸ್ತೆಯನ್ನು ನಗರ ಪಂಚಾಯತ್ ಅನುದಾನದಲ್ಲಿ ಅಭಿವೃದ್ಧಿಪಡಿಸುವುದು ಅಸಾಧ್ಯವಾಗಿದ್ದು ಶಾಸಕರ ಸಹಕಾರದಿಂದ ವಿಶೇಷ ಅನುದಾನದಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.