ಉಡುಪಿ: ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ಪ್ರಕಟಿಸಿರುವ ವರದಿಯ ಸಮಗ್ರ ತನಿಖೆಗೆ ನಡೆಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಅಜ್ಜರಕಾಡುವಿನ ಎಲ್ಐಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಅದಾನಿ ಸಂಸ್ಥೆ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು, ಗೌತಮ್ ಅದಾನಿ ಕೇಂದ್ರ ಸರಕಾರದ ನೆರವು ಪಡೆದು ಬಡಜನರ ಹಣವನ್ನು ದೋಚಿದ್ದಾರೆ. ಕಂಪೆನಿಯ ವ್ಯವಹಾರದಲ್ಲಿ ವಂಚನೆ ಎಸಗಿ ದೇಶದ ಜನರಿಗೆ ದ್ರೋಹ ಎಸಗಿದ್ದಾರೆ. ಹಾಗಾಗಿ ಅದಾನಿ ಸಮೂಹ ಸಂಸ್ಥೆಯ ವ್ಯವಹಾರದ ಕುರಿತು ಹಿಂಡನ್ ಬರ್ಗ್ ಪ್ರಕಟಿಸಿರುವ ವರದಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ, ಅದಾನಿ ಸೇರಿದಂತೆ ಈವರೆಗೆ ದೇಶದ 29 ಮಂದಿ ಉದ್ಯಮಿಗಳು ಬ್ಯಾಂಕ್ಗಳಿಂದ 10 ಲಕ್ಷ ಕೋಟಿ ರೂ. ಹಣವನ್ನು ದೋಚಿಸಿದ್ದಾರೆ. ಆ ಮೂಲಕ ದೇಶದಲ್ಲಿ ಒಂದು ರೀತಿಯ ಅರಾಜಕತೆ ಸೃಷ್ಟಿಸಿದ್ದಾರೆ. ದೇಶದ ಹಣ ದೋಚುವುದು ಕೂಡ ಒಂದು ರೀತಿಯ ಉಗ್ರವಾದ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕುಶಲ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಹರೀಶ್ ಕಿಣಿ, ಅಣ್ಣಯ್ಯ ಶೇರಿಗಾರ್, ಪ್ರಖ್ಯಾತ್ ಶೆಟ್ಟಿ, ನರಸಿಂಹ ಮೂರ್ತಿ, ದಿನೇಶ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.